ಆರೂರ್ (ಕೇರಳ): ಹೊಸ ಪುಸ್ತಕ, ಹೊಸ ಸಮವಸ್ತ್ರ ಧರಿಸಿ ಸಡಗರದಿಂದ 8ನೇ ತರಗತಿ ಮೆಟ್ಟಿಲು ಹತ್ತಬೇಕಿದ್ದ 13 ವರ್ಷದ ವಿದ್ಯಾರ್ಥಿನಿಯೊಬ್ಬಳು ಹಾವಿನ ಕಡಿತವನ್ನು ಇರುವೆ ಕಡಿತವೆಂದು ನಿರ್ಲಕ್ಷಿಸಿದ ಕಾರಣ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಧೃತಿಗೆಡಿಸುವ ಘಟನೆ ಕೇರಳದ ಆರೂರ್ನಲ್ಲಿ ನಡೆದಿದೆ.
ಆರೂರ್ ಸೇಂಟ್ ಆಗಸ್ಟೀನ್ಸ್ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿ ನಿಯಾ ಲೆನಿನ್ (13) ಮೃತಪಟ್ಟ ದುರ್ದೈವಿ. ಹಾವಿನ ವಿಷ ದೇಹಕ್ಕೆ ವ್ಯಾಪಿಸಿ 24 ದಿನಗಳ ಕಾಲ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡಿದ ಬಾಲಕಿ ಭಾನುವಾರ ಬೆಳಿಗ್ಗೆ ಕೊನೆಯುಸಿರೆಳೆದಿದ್ದಾಳೆ.
ಸ್ಥಳೀಯ ದೇವಸ್ಥಾನದ ಅರ್ಚಕ ದಂಪತಿಯಾದ ಲೆನಿನ್ ಮತ್ತು ರಾಜಿ ಅವರ ಕಿರಿಯ ಮಗಳಾದ ನಿಯಾ, ಮೇ 7ರ ಸಂಜೆ ನಿವಾಸಿಗಳ ಸಂಘದ ವಾರ್ಷಿಕ ದಿನಾಚರಣೆಗಾಗಿ ಸ್ನೇಹಿತರೊಂದಿಗೆ ನೃತ್ಯ ಅಭ್ಯಾಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಈ ಘಟನೆ ನಡೆದಿತ್ತು. ಸಂಜೆ 7.30ರ ಸುಮಾರಿಗೆ ಆಕೆಯ ಕಾಲಿಗೆ ತೀಕ್ಷ್ಣವಾದ ನೋವು ಕಾಣಿಸಿಕೊಂಡಿತ್ತು. ಆದರೆ, ತನಗೆ ದೊಡ್ಡ ಕಪ್ಪು ಇರುವೆ ಕಚ್ಚಿರಬಹುದು ಎಂದು ಭಾವಿಸಿದ್ದ ನಿಯಾ, ಇದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಪಕ್ಕದ ಮನೆಯವರು ಹಾಗೂ ಸ್ನೇಹಿತರು ಇದು ಹಾವು ಕಡಿತವಿರಬಹುದು ಎಂದು ಶಂಕಿಸಿ, ಪರಿಶೀಲಿಸಲು ಒತ್ತಾಯಿಸಿದರೂ, ನೃತ್ಯದ ಉತ್ಸಾಹದಲ್ಲಿದ್ದ ಬಾಲಕಿ “ಅದು ಗಂಭೀರವಾದದ್ದೇನೂ ಅಲ್ಲ, ಇರುವೆ ಅಥವಾ ಕಪ್ಪೆ ತಾಗಿರಬಹುದು” ಎಂದು ಹೇಳಿ ಕಾಲಿಗೆ ಅರಿಶಿನ ಪುಡಿ ಹಚ್ಚಿಕೊಂಡು ನಿರ್ಲಕ್ಷಿಸಿದ್ದಳು.
ತದನಂತರ ವಿಷ ದೇಹ ಪೂರ್ತಿ ಹರಡಿ ಬಾಲಕಿ ಅಸ್ವಸ್ಥಗೊಂಡಾಗ ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು. ಅರ್ಚಕರಾಗಿದ್ದ ತಂದೆಗೆ ವೆಂಟಿಲೇಟರ್ ಹಾಗೂ ಚಿಕಿತ್ಸೆಯ ₹12 ಲಕ್ಷ ವೆಚ್ಚ ಭರಿಸುವುದು ಅಸಾಧ್ಯವಾಗಿತ್ತು. ಈ ವೇಳೆ ನೆರೆಹೊರೆಯವರು ಹಾಗೂ ಶಾಲಾ ಶಿಕ್ಷಕರು ಯುಪಿಐ ಲಿಂಕ್ ಮೂಲಕ ಹಣ ಸಂಗ್ರಹಿಸಿಕೊಟ್ಟಿದ್ದರು. ಅಲ್ಲದೆ ತಂದೆ ತನ್ನ ಒಂಟಿ ಮನೆ ಮತ್ತು ಜಮೀನನ್ನು ಅಡಮಾನವಿಟ್ಟು ₹5 ಲಕ್ಷ ಸಾಲ ಪಡೆದು ಮಗಳ ಪ್ರಾಣ ಉಳಿಸಲು ಹೆಣಗಾಡಿದ್ದರು. ಚಿಕಿತ್ಸೆ ಮಧ್ಯೆ ವೆಂಟಿಲೇಟರ್ನಿಂದ ಹೊರಬಂದು ಚೇತರಿಸಿಕೊಳ್ಳುವ ಭರವಸೆ ಮೂಡಿಸಿದ್ದ ನಿಯಾ, ಶನಿವಾರ ರಾತ್ರಿ ಹಠಾತ್ತನೆ ತೀವ್ರ ಅಸ್ವಸ್ಥಗೊಂಡು ಭಾನುವಾರ ಬೆಳಿಗ್ಗೆ 7.30ಕ್ಕೆ ಕೊನೆಯುಸಿರೆಳೆದಿದ್ದಾಳೆ.
ಜೂನ್ 1ರ ಸೋಮವಾರದಂದು ಶಾಲೆ ಪುನರಾರಂಭಗೊಂಡಾಗ ನಿಯಾಳ ಸೀಟು ಖಾಲಿಯಾಗಿದ್ದು ಕಂಡು ಶಿಕ್ಷಕರು ಮತ್ತು ಸಹಪಾಠಿಗಳು ಕಣ್ಣೀರು ಹಾಕಿದ್ದಾರೆ. ಶಾಲೆಯಲ್ಲಿ ಸಂತಾಪ ಸೂಚಕ ಸಭೆ ನಡೆಸಿ ಮೃತ ಬಾಲಕಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನೆಟ್ಟೂರಿನ ಶಾಂತಿವನಂ ಚಿತಾಗಾರದಲ್ಲಿ ಬಾಲಕಿಯ ಅಂತ್ಯಸಂಸ್ಕಾರ ನೆರವೇರಿಸಲಾಗಿದ್ದು, ಇಡೀ ಗ್ರಾಮವೇ ಶೋಕ ಸಾಗರದಲ್ಲಿ ಮುಳುಗಿದೆ.