ನವದೆಹಲಿ: ಅಸ್ಸಾಂನ ಜೋರ್ಹತ್ನಲ್ಲಿ ಭಾರತೀಯ ವಾಯುಪಡೆಯ ಎಎನ್-೩೨ (AN-32) ಸಾರಿಗೆ ವಿಮಾನವೊಂದು ಪತನಗೊಂಡು, ಐವರು ವಾಯು ಯೋಧರು ಕರ್ತವ್ಯದ ವೇಳೆ ವೀರಮರಣ ಅಪ್ಪಿದ್ದಾರೆ. ವಾಯು ಯೋಧರ ಈ ಸರ್ವೋಚ್ಚ ತ್ಯಾಗಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಅಮರ ಯೋಧರನ್ನು ವಾಯುಪಡೆ ಗುರುತಿಸಿದೆ:
ಸ್ಕ್ವಾಡ್ರನ್ ಲೆಫ್ಟಿನೆಂಟ್ ಪ್ರಶಾಂತ್ ಸಿಂಗ್
ಫ್ಲೈಟ್ ಲೆಫ್ಟಿನೆಂಟ್ ಶುಭಮ್ ಕುಮಾರ್
ಸಾರ್ಜೆಂಟ್ ಜಿತೇಂದ್ರ ಶರ್ಮಾ
ಅಗ್ನಿವೀರ್ವಾಯು ಖೇಮರಾಮ್ ಕುಮಾವತ್
ಅಗ್ನಿವೀರ್ವಾಯು ಡ್ಯಾನಿಶ್ ಆಲಂ
ದುರಂತದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಪ್ರಕಟಿಸಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, “ವಾಯು ಯೋಧರು ದೇಶಕ್ಕಾಗಿ ತಮ್ಮ ಸರ್ವೋಚ್ಚ ತ್ಯಾಗವನ್ನು ಮಾಡಿದ್ದಾರೆ. ಅವರ ಅಪ್ರತಿಮ ಧೈರ್ಯ, ದೇಶ ಸೇವೆ ಮತ್ತು ರಾಷ್ಟ್ರದ ಮೇಲಿನ ಸಮರ್ಪಣಾ ಭಾವವನ್ನು ಭಾರತ ದೇಶವು ಸದಾ ಹೆಮ್ಮೆ ಮತ್ತು ಕೃತಜ್ಞತೆಯಿಂದ ಸ್ಮರಿಸಲಿದೆ” ಎಂದು ಕಂಬನಿ ಮಿಡಿದಿದ್ದಾರೆ.
ಜೊತೆಗೆ, ಮೃತ ಯೋಧರನ್ನು ಕಳೆದುಕೊಂಡು ಕಣ್ಣೀರಿಡುತ್ತಿರುವ ಅವರ ಕುಟುಂಬಸ್ಥರಿಗೆ ಹೃತ್ಪೂರ್ವಕ ಸಂತಾಪ ಸೂಚಿಸಿರುವ ಅವರು, “ಈ ಅತ್ಯಂತ ಕಠಿಣ ಹಾಗೂ ದುಃಖದ ಸಮಯದಲ್ಲಿ ಇಡೀ ರಾಷ್ಟ್ರವು ಹುತಾತ್ಮರ ಕುಟುಂಬಗಳೊಂದಿಗೆ ದೃಢವಾಗಿ ನಿಲ್ಲಲಿದೆ” ಎಂದು ಭರವಸೆ ನೀಡಿದ್ದಾರೆ.
ವಿಮಾನ ಅಪಘಾತಕ್ಕೆ ನಿಖರವಾದ ಕಾರಣವೇನೆಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಘಟನೆಯ ಕುರಿತು ಉನ್ನತ ಮಟ್ಟದ ತನಿಖೆ ನಡೆಸಲು ವಾಯುಪಡೆಯ ಅಧಿಕಾರಿಗಳು ಆದೇಶ ಹೊರಡಿಸಿದ್ದು, ಸ್ಥಳದಲ್ಲಿ ಪರಿಶೀಲನೆ ಮುಂದುವರಿದಿದೆ.