ಹುಣಸಗಿ: ಮನೆಯ ಬೀಗ ಮುರಿದು ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ್ದ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ಹುಣಸಗಿ ಠಾಣೆ ಪೊಲೀಸರು, ಆರೋಪಿಯನ್ನು ಬಂಧಿಸಿ ಆತನಿಂದ 73 ಗ್ರಾಂ ಬಂಗಾರ ಹಾಗೂ ₹2 ಲಕ್ಷ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
ಸಿದ್ದಾಪುರ (ಬಿ) ಗ್ರಾಮದ ದೇವಪ್ಪ ಯಮನಪ್ಪ ಹುಲಕೇರಿ ಬಂಧಿತ ಆರೋಪಿ.
ಸಿದ್ದಾಪುರ (ಬಿ) ಗ್ರಾಮದ ಯಲ್ಲಪ್ಪ ಬಸಪ್ಪ ಹುಲಕೇರಿ ಎಂಬುವರ ಜಮೀನಿನಲ್ಲಿರುವ ಮನೆಗೆ ಏಪ್ರಿಲ್ 17ರ ರಾತ್ರಿ 9.30ರ ಸುಮಾರಿಗೆ ನುಗ್ಗಿದ್ದ ಅಪರಿಚಿತ ಕಳ್ಳರು, ಮನೆಯ ಬೀಗ ಮುರಿದು ಕಬ್ಬಿಣದ ಪೆಟ್ಟಿಗೆಯಲ್ಲಿದ್ದ 73 ಗ್ರಾಂ ಬಂಗಾರ ಹಾಗೂ ₹4 ಲಕ್ಷ ನಗದನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು.
ಈ ಕುರಿತು ಏಪ್ರಿಲ್ 22 ರಂದು ಹುಣಸಗಿ ಪೊಲೀಸ್ ಠಾಣೆಯಲ್ಲಿ (ಗುನ್ನೆ ಸಂಖ್ಯೆ: 65/2026, BNS 2023ರ ಕಲಂ 331(4), 305 ಅಡಿಯಲ್ಲಿ) ಪ್ರಕರಣ ದಾಖಲಾಗಿತ್ತು.
ಪ್ರಕರಣದ ತೀವ್ರ ತನಿಖೆ ಕೈಗೊಂಡ ಪೊಲೀಸರು, ಜುಲೈ 10ರಂದು ಆರೋಪಿ ದೇವಪ್ಪ ಯಮನಪ್ಪ ಹುಲಕೇರಿಯನ್ನು ಬಂಧಿಸಿ ಕಠಿಣ ವಿಚಾರಣೆಗೊಳಪಡಿಸಿದರು. ಈ ವೇಳೆ ಆರೋಪಿಯಿಂದ 73 ಗ್ರಾಂ ಬಂಗಾರದ ಆಭರಣ ಮತ್ತು ₹2 ಲಕ್ಷ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಸುರಪುರ ಡಿ.ಎಸ್.ಪಿ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಚರಣೆ ನಡೆದಿದೆ:
ರವಿ ಕುಮಾರ್ ಎಸ್.ಎನ್ (ಹುಣಸಗಿ ಸಿಪಿಐ)
ರಾಹುಲ್ ಪವಾಡ (ಪಿಎಸ್ಐ)
ಬಾಗಣ್ಣ (ಕ್ರೈಂ ಪಿಎಸ್ಐ)
ದ್ಯಾವಣ್ಣ (ಪಿಸಿ 255)
ಸಿದ್ದಪ್ಪ (ಪಿಸಿ 28) ಹಾಗೂ ಠಾಣೆಯ ಇತರ ಸಿಬ್ಬಂದಿ.
ಸಂದಿಗ್ಧ ಪ್ರಕರಣವನ್ನು ಸಮಯೋಚಿತವಾಗಿ ಭೇದಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ತನಿಖಾ ತಂಡದ ಕಾರ್ಯವನ್ನು ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮುಕ್ತಕಂಠದಿಂದ ಶ್ಲಾಘಿಸಿದ್ದು, ವಿಶೇಷ ಬಹುಮಾನವನ್ನು ಘೋಷಿಸಿದ್ದಾರೆ.