ಶಿವಮೊಗ್ಗ: ಶಾಲೆ ತೊರೆದ ಮಕ್ಕಳನ್ನು ಮರಳಿ ಶಿಕ್ಷಣದ ಮುಖ್ಯವಾಹಿನಿಗೆ ಕರೆತರುವ ಐತಿಹಾಸಿಕ ಮತ್ತು ಮಹತ್ವದ ಹೆಜ್ಜೆಯನ್ನಿಟ್ಟಿರುವ ಶಿವಮೊಗ್ಗ ಜಿಲ್ಲಾಡಳಿತ, ತಾಲೂಕಿನಾದ್ಯಂತ ಬೃಹತ್ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದೆ. ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್, ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ನಾಯ್ಕ್ ಹಾಗೂ ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್ವರ್ ಸೇರಿದಂತೆ ವಿವಿಧ ಇಲಾಖೆಗಳ ಉನ್ನತಾಧಿಕಾರಿಗಳ ತಂಡವೇ ನೇರವಾಗಿ ಫೀಲ್ಡಿಗಿಳಿದು ಪೋಷಕರ ಮನವೊಲಿಸುವ ಕಾರ್ಯದಲ್ಲಿ ತೊಡಗಿದೆ.
ಮೂರು ಇಲಾಖೆಗಳ ಜಂಟಿ ಅಭಿಯಾನ:
ಮಕ್ಕಳ ಭವಿಷ್ಯವನ್ನು ಸಾಗರದಷ್ಟು ಉಜ್ವಲಗೊಳಿಸುವ ನಿಟ್ಟಿನಲ್ಲಿ ಆಗಸ್ಟ್ 10 ಮತ್ತು 11 ರಂದು ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಶಿಕ್ಷಣ ಇಲಾಖೆ, ಪಂಚಾಯತ್ ರಾಜ್ ಇಲಾಖೆ ಹಾಗೂ ಪೊಲೀಸ್ ಇಲಾಖೆಗಳ ಜಂಟಿ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದು, ಶಿವಮೊಗ್ಗ ತಾಲೂಕಿನ ಪ್ರತಿಯೊಂದು ಹಳ್ಳಿ-ಹಳ್ಳಿಗಳಿಗೂ ಅಧಿಕಾರಿಗಳ ತಂಡ ಭೇಟಿ ನೀಡಿ ಮನೆ ಬಾಗಿಲಲ್ಲೇ ಜಾಗೃತಿ ಮೂಡಿಸುತ್ತಿದೆ.
ಪೂರ್ವ ಸಿದ್ಧತೆಯೊಂದಿಗೆ ದಿಢೀರ್ ಭೇಟಿ:
ಕಾರ್ಯಾಚರಣೆಗೂ ಮುನ್ನವೇ ಶಿಕ್ಷಣ ಇಲಾಖೆಯು ಶಾಲೆ ಬಿಟ್ಟ ಮಕ್ಕಳ ಸಮಗ್ರ ಪಟ್ಟಿಯನ್ನು ಸಿದ್ಧಪಡಿಸಿತ್ತು. ಯಾವ ಗ್ರಾಮಗಳಲ್ಲಿ ಮಕ್ಕಳಿದ್ದಾರೆ ಹಾಗೂ ಪ್ರಸ್ತುತ ಅವರು ಏನು ಮಾಡುತ್ತಿದ್ದಾರೆ ಎಂಬ ಸಂಪೂರ್ಣ ಮಾಹಿತಿಯೊಂದಿಗೆ ಕಣಕ್ಕಿಳಿದ ಅಧಿಕಾರಿಗಳ ಪಡೆ, ಸೋಮವಾರ ಬೆಳಿಗ್ಗೆಯಿಂದಲೇ ಮಕ್ಕಳ ಮನೆಗಳು ಹಾಗೂ ಅವರಿರುವ ಸ್ಥಳಗಳಿಗೆ ದಿಢೀರ್ ಭೇಟಿ ನೀಡಿತು. ಈ ವೇಳೆ ಮಕ್ಕಳು ಮತ್ತು ಪೋಷಕರೊಂದಿಗೆ ನೇರ ಸಮಾಲೋಚನೆ ನಡೆಸಿದ ಅಧಿಕಾರಿಗಳು, ಸರ್ಕಾರದಿಂದ ಉಚಿತ ಶಿಕ್ಷಣ ಮತ್ತು ವಿದ್ಯಾರ್ಥಿಗಳಿಗೆ ಸಿಗುವ ಸೌಲಭ್ಯಗಳ ಕುರಿತು ಮನವರಿಕೆ ಮಾಡಿಕೊಟ್ಟರು.
ಕಾನೂನಿನ ಅರಿವು – ಸಮ್ಮತಿಸಿದ ಪೋಷಕರು:
ಸಮಾಲೋಚನೆ ವೇಳೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಹಾಗೂ ಬಾಲಕಾರ್ಮಿಕ ನಿಷೇಧ ಕಾಯ್ದೆಗಳ ಕುರಿತು ಪೋಷಕರಿಗೆ ಸ್ಪಷ್ಟ ಅರಿವು ಮೂಡಿಸಲಾಯಿತು. ಜಿಲ್ಲೆಯ ಉನ್ನತಾಧಿಕಾರಿಗಳೇ ಖುದ್ದಾಗಿ ಮನೆಬಾಗಿಲಿಗೆ ಆಗಮಿಸಿ ತಿಳಿಹೇಳಿದ್ದನ್ನು ಕಂಡು ಭಾವುಕರಾದ ಹಲವು ಪೋಷಕರು, ತಮ್ಮ ಮಕ್ಕಳನ್ನು ತಕ್ಷಣವೇ ಮರಳಿ ಶಾಲೆಗೆ ಕಳುಹಿಸಲು ಸಮ್ಮತಿ ಸೂಚಿಸಿದ್ದಾರೆ.
ಜಿಲ್ಲಾಡಳಿತದ ಈ ಕ್ರಿಯಾಶೀಲ ನಡೆ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
ವರದಿ: ಮಂಜುನಾಥ್. ಪಿ