ಮಂಡ್ಯ: ಹಲವು ವರ್ಷಗಳಿಂದ ಭಿಕ್ಷಾಟನೆ ನಡೆಸುತ್ತಿದ್ದ ವೃದ್ಧೆಯೊಬ್ಬರು ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದು, ಅವರ ಮನೆಯಲ್ಲಿ ಬರೋಬ್ಬರಿ ೩೦ ಲಕ್ಷ ರೂಪಾಯಿಗೂ ಅಧಿಕ ಹಣ ಪತ್ತೆಯಾಗಿರುವ ಬೆರಗುಗೊಳಿಸುವ ಘಟನೆ ಮಂಡ್ಯ ನಗರದ ಗುತ್ತಲು ಬಡಾವಣೆಯಲ್ಲಿ ನಡೆದಿದೆ.
ಮೃತ ವೃದ್ಧೆಯನ್ನು ನೂರ್ ಎಂದು ಗುರುತಿಸಲಾಗಿದೆ. ಕುಟುಂಬಸ್ಥರು ತನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಕಾರಣಕ್ಕೆ ಈಕೆ ಕಳೆದ ಹಲವು ವರ್ಷಗಳಿಂದ ಗುತ್ತಲು ಬಡಾವಣೆ ಹಾಗೂ ನಗರದ ವಿವಿಧೆಡೆ ಭಿಕ್ಷಾಟನೆ ಮಾಡಿ ಜೀವನ ನಡೆಸುತ್ತಿದ್ದರು. ಭಿಕ್ಷಾಟನೆಯಿಂದ ಬಂದ ಹಣವನ್ನು ಯಾರೂ ಇಲ್ಲದ ವೇಳೆ ಮನೆಯಲ್ಲೇ ರಹಸ್ಯವಾಗಿ ಸಂಗ್ರಹಿಸಿಡುತ್ತಿದ್ದರು.
ನಿನ್ನೆ ವಯೋಸಹಜ ಅನಾರೋಗ್ಯದಿಂದ ನೂರ್ ಮೃತಪಟ್ಟಿದ್ದರು. ವಿಷಯ ತಿಳಿದ ಸಂಬಂಧಿಕರು ಹಾಗೂ ಸ್ಥಳೀಯರು ಸೇರಿ ವೃದ್ಧೆಯ ಅಂತ್ಯಸಂಸ್ಕಾರವನ್ನು ನೆರವೇರಿಸಿದರು. ಬಳಿಕ ವಸ್ತುವಿಷಯ ಪರಿಶೀಲನೆಗೆಂದು ನೂರ್ ಅವರ ಮನೆಗೆ ತೆರಳಿ ನೋಡಿದಾಗ ಎಲ್ಲರೂ ದಂಗಾಗಿದ್ದಾರೆ.
ಮನೆಯಲ್ಲಿದ್ದ ಹಲವು ಮೂಟೆಗಳಲ್ಲಿ ಅಪಾರ ಪ್ರಮಾಣದ ನಾಣ್ಯಗಳು ಹಾಗೂ ಕರೆನ್ಸಿ ನೋಟುಗಳು ಪತ್ತೆಯಾಗಿವೆ. ತಕ್ಷಣ ಸ್ಥಳೀಯರು ಮತ್ತು ಸಂಬಂಧಿಕರು ಸೇರಿ ಹಣವನ್ನು ಎಣಿಕೆ ಮಾಡಲು ಪ್ರಾರಂಭಿಸಿದ್ದು, ಸುಮಾರು ೩೦ ಲಕ್ಷ ರೂಪಾಯಿಗೂ ಅಧಿಕ ಮೊತ್ತದ ಹಣವಿರುವುದು ತಿಳಿದುಬಂದಿದೆ. ಎಣಿಕೆ ಕಾರ್ಯ ಮುಗಿದ ನಂತರ ಸ್ಥಳೀಯರು ಮಾತುಕತೆ ನಡೆಸಿ ಆ ಹಣವನ್ನು ಸಂಬಂಧಿಕರಿಗೆ ಹಸ್ತಾಂತರಿಸಿದ್ದಾರೆ.
ಆಕ್ರೋಶ ಮತ್ತು ಆರೋಪ:
ವೃದ್ಧೆ ಜೀವಂತವಾಗಿದ್ದಾಗ ಆಕೆಯನ್ನು ನಿರ್ಲಕ್ಷಿಸಿ ಭಿಕ್ಷಾಟನೆ ಮಾಡಲು ಬಿಟ್ಟಿದ್ದ ಕುಟುಂಬಸ್ಥರು, ಈಗ ಆಕೆ ಭಿಕ್ಷಾಟನೆ ಮಾಡಿ ಕೂಡಿಟ್ಟಿದ್ದ ಲಕ್ಷಾಂತರ ರೂಪಾಯಿ ಹಣವನ್ನು ಹಂಚಿಕೊಂಡಿದ್ದಾರೆ ಎಂಬ ತೀವ್ರ ಆಕ್ರೋಶ ಸ್ಥಳೀಯ ವಲಯದಲ್ಲಿ ವ್ಯಕ್ತವಾಗಿದೆ.
ಈ ಘಟನೆಯು ಮಂಡ್ಯದ ಪೂರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ.