ಬೆಂಗಳೂರು ನಗರದ ಐತಿಹಾಸಿಕ ಲಾಲ್ಬಾಗ್ನ ಸಸ್ಯ ಮಾರಾಟ ಕೇಂದ್ರದಲ್ಲಿ ನಿಷೇಧಿತ ‘ಕೋನೊಕಾರ್ಪಸ್’ (Conocarpus) ಗಿಡಗಳನ್ನು ಅನಧಿಕೃತವಾಗಿ ಬೆಳೆಸಿ ಸಾರ್ವಜನಿಕರಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
‘ವೃಕ್ಷ ಬಚಾವೋ ಆಂದೋಲನ ಸಮಿತಿ’ಯ ಮುಖ್ಯಸ್ಥ ಹಾಗೂ ಪರಿಸರವಾದಿ ಮಂಜು ಅವರು ಈ ಸಂಬಂಧ ‘ಲಾಲ್ಬಾಗ್ ದಿ ನರ್ಸರಿ ಮೇನ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್’ ವಿರುದ್ಧ ಬಹಿರಂಗ ಆರೋಪ ಮಾಡಿದ್ದು, ಅರಣ್ಯ ಇಲಾಖೆ ತಕ್ಷಣವೇ ಮಧ್ಯಪ್ರವೇಶಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಆರೋಪದ ಪ್ರಮುಖ ಅಂಶಗಳು:
ಸರ್ಕಾರದ ಆದೇಶದ ಉಲ್ಲಂಘನೆ: ಈ ಹಿಂದೆ ಅರಣ್ಯ ಸಚಿವರಾಗಿದ್ದ ಈಶ್ವರ ಖಂಡ್ರೆ ಅವರು ರಾಜ್ಯಾದ್ಯಂತ ಕೋನೊಕಾರ್ಪಸ್ ಗಿಡಗಳನ್ನು ಬೆಳೆಸುವುದು ಮತ್ತು ನೆಡುವುದನ್ನು ನಿಷೇಧಿಸಿ ಸ್ಪಷ್ಟ ಆದೇಶ ಹೊರಡಿಸಿದ್ದರು. ಈ ಆದೇಶವನ್ನು ಲಾಲ್ಬಾಗ್ನ ನರ್ಸರಿಯಲ್ಲೇ ಉಲ್ಲಂಘಿಸಲಾಗಿದೆ ಎಂದು ಆರೋಪಿಸಲಾಗಿದೆ.
ಆರೋಗ್ಯ ಮತ್ತು ಪರಿಸರಕ್ಕೆ ಕಂಠಕ: ಕೇಂದ್ರ ಸರ್ಕಾರದ ತಜ್ಞರ ಸಮಿತಿಯ ಶಿಫಾರಸಿನಂತೆ ಈ ಸಸ್ಯವು ಪರಿಸರ ಸಮತೋಲನವನ್ನು ಹಾಳುಗೆಡವುವುದಲ್ಲದೆ, ಮಾನವನ ಆರೋಗ್ಯದ ಮೇಲೆಯೂ (ವಿಶೇಷವಾಗಿ ಉಸಿರಾಟದ ಸಮಸ್ಯೆ ಮತ್ತು ಅಲರ್ಜಿ) ದುಷ್ಪರಿಣಾಮ ಬೀರುತ್ತದೆ.
ವಿವಿಧ ರಾಜ್ಯಗಳಲ್ಲಿ ನಿಷೇಧ: ಕೋನೊಕಾರ್ಪಸ್ನ ಅಪಾಯಕಾರಿ ಗುಣಗಳಿಂದಾಗಿ ಕರ್ನಾಟಕ ಮಾತ್ರವಲ್ಲದೆ ಗುಜರಾತ್, ತೆಲಂಗಾಣ, ತಮಿಳುನಾಡು ಹಾಗೂ ಆಂಧ್ರಪ್ರದೇಶ ರಾಜ್ಯಗಳಲ್ಲೂ ಇದರ ನೆಡುವಿಕೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ಸಾರ್ವಜನಿಕರಿಗೆ ಪರಿಸರ ಜಾಗೃತಿ ಮೂಡಿಸಬೇಕಾದ ಸರ್ಕಾರಿ ಸಂಸ್ಥೆಯ ಸನ್ನಿಧಿಯಲ್ಲೇ ಇಂತಹ ನಿಷೇಧಿತ ಗಿಡಗಳ ಮಾರಾಟ ನಡೆಯುತ್ತಿರುವುದು ಸಾರ್ವಜನಿಕರು ಹಾಗೂ ಪರಿಸರ ಪ್ರೇಮಿಗಳಲ್ಲಿ ಆತಂಕ ಮೂಡಿಸಿದೆ. ಸಂಬಂಧಪಟ್ಟ ತೋಟಗಾರಿಕೆ ಮತ್ತು ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳು ಈ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂಬ ಬಲವಾದ ಒತ್ತಾಯ ಕೇಳಿಬಂದಿದೆ.