ಕೃಷ್ಣರಾಜಪೇಟೆ: ತಾಲೂಕಿನ ನಾರ್ಗೋನಹಳ್ಳಿ ಗ್ರಾಮದಲ್ಲಿ ಹಳೆಯ ಮನೆಯ ಮೇಲ್ಚಾವಣಿ ಹಾಗೂ ಗೋಡೆಗಳು ಕುಸಿದು ಬಿದ್ದಿದ್ದು, ಮಂಜುಳಾ ಸಣ್ಣರಾಜು ಅವರ ಕುಟುಂಬ ತೀವ್ರ ಆತಂಕದ ವಾತಾವರಣದಲ್ಲಿ ದಿನ ದೂಡುವಂತಾಗಿದೆ.
ಸುಮಾರು 25 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಈ ಮನೆಯ ಗೋಡೆಗಳು ಸಂಪೂರ್ಣ ಶಿಥಿಲಗೊಂಡಿದ್ದು, ಮೇಲ್ಚಾವಣಿಯೂ ಹಾನಿಯಾಗಿದೆ. ಮಳೆ ಹಾಗೂ ಪ್ರತಿಕೂಲ ಹವಾಮಾನದ ಸಂದರ್ಭದಲ್ಲಿ ಯಾವ ಕ್ಷಣದಲ್ಲಿ ಮನೆ ಕುಸಿದು ಬೀಳುತ್ತದೆಯೋ ಎಂಬ ಭಯದಲ್ಲೇ ಕುಟುಂಬಸ್ಥರು ಕಾಲ ಕಳೆಯುತ್ತಿದ್ದಾರೆ.
ಅಧಿಕಾರಿಗಳ ಅಲೆದಾಟ, ಪರಿಹಾರ ಸಿಗದ ನಿರಾಶೆ:
ಸುರಕ್ಷಿತ ವಾಸಸ್ಥಳ ಹಾಗೂ ಸರ್ಕಾರದ ವಸತಿ ಯೋಜನೆಯಡಿ ನೂತನ ಮನೆ ಮಂಜೂರು ಮಾಡುವಂತೆ ಮಂಜುಳಾ ಸಣ್ಣರಾಜು ಅವರು ಹಲವು ವರ್ಷಗಳಿಂದ ಗ್ರಾಮ ಪಂಚಾಯಿತಿ ಮತ್ತು ತಾಲೂಕು ಕಚೇರಿಗಳಿಗೆ ಅಲೆದಾಡಿದ್ದರೂ ಯಾವುದೇ ಶಾಶ್ವತ ಪರಿಹಾರ ಸಿಕ್ಕಿಲ್ಲ. “ಅಧಿಕಾರಿಗಳನ್ನು ಭೇಟಿ ಮಾಡಿದರೆ ಕೇವಲ ₹5,000 ರಿಂದ ₹6,000 ನೀಡುವುದಾಗಿ ಹೇಳಿ ಕಳುಹಿಸುತ್ತಿದ್ದಾರೆ. ಈ ಅಲ್ಪ ಮೊತ್ತದಲ್ಲಿ ಮನೆಯನ್ನು ದುರಸ್ತಿ ಮಾಡಲು ಅಥವಾ ಹೊಸ ಮನೆ ನಿರ್ಮಿಸಲು ಸಾಧ್ಯವಿಲ್ಲ” ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.
ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವಾಸಕ್ಕೆ ಯೋಗ್ಯವಲ್ಲದ ಈ ಮನೆಯ ವಾಸ್ತವ ಸ್ಥಿತಿಯನ್ನು ಅರಿತು ಸರ್ಕಾರದ ಯೋಜನೆಯಡಿ ಹೊಸ ಮನೆ ಮಂಜೂರು ಮಾಡಿಕೊಡಬೇಕೆಂದು ಪತ್ರಿಕಾ ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಂಜುಳಾ ಸಣ್ಣರಾಜು, ವರುಣ್ ಹಾಗೂ ಕುಟುಂಬದ ಇತರ ಸದಸ್ಯರು ಉಪಸ್ಥಿತರಿದ್ದರು.