ಬಾಗಲಕೋಟೆ: ಸರ್ಕಾರದ ಸಹಾಯಧನದ ಮಂಜೂರಾತಿ ಆದೇಶ ನೀಡಲು ಹಾಗೂ ವಾಹನದ ಜಿಪಿಎಸ್ ಫೋಟೊ ಮಾಡಲು ₹3 ಸಾವಿರ ಲಂಚ ಪಡೆಯುತ್ತಿದ್ದ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಪ್ರಥಮ ದರ್ಜೆ ಸಹಾಯಕ (FDA) ಗುರುನಾಥ ಎಂ. ಮಸಳಿ ಅವರನ್ನು ಲೋಕಾಯುಕ್ತ ಪೊಲೀಸರು ಬುಧವಾರ ರೆಡ್ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ಮುಧೋಳ ತಾಲ್ಲೂಕಿನ ಜಾಲಿಬೇರಿ ಗ್ರಾಮದ ಬಸವರಾಜ ಗೋವಿಂದಪ್ಪ ಮೆಟಗುಡ್ಡ ಅವರು ನೀಡಿದ ದೂರಿನ ಮೇರೆಗೆ ಈ ದಾಳಿ ನಡೆದಿದೆ.
ಪ್ರಕರಣದ ಹಿನ್ನೆಲೆ:
ಫಿರ್ಯಾದಿದಾರರಿಗೆ ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದ ‘ಸ್ವಾವಲಂಬಿ ಸಾರಥಿ’ ಯೋಜನೆಯಡಿ (2025–26ನೇ ಸಾಲು) ಗೂಡ್ಸ್ ವಾಹನ ಖರೀದಿಸಲು ₹3 ಲಕ್ಷ ಸಹಾಯಧನ ಮಂಜೂರಾಗಿತ್ತು. ಈ ಹಣವನ್ನು ಮಹೇಂದ್ರಾ ಫೈನಾನ್ಸ್ಗೆ ಬಿಡುಗಡೆ ಮಾಡುವ ಮಂಜೂರಾತಿ ಆದೇಶ ಪತ್ರ ನೀಡಲು ಆರೋಪಿ ಗುರುನಾಥ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಸೆ.8ರಂದು ಮಂಜೂರಾತಿ ಆದೇಶ ನೀಡಿದ ನಂತರ, ವಾಹನದ ಜಿಪಿಎಸ್ ಫೋಟೊ ಮಾಡಿಸಲು ತಮ್ಮ ಬಳಿ ತರುವಂತೆ ತಿಳಿಸಿ ₹3,000 ಲಂಚ ಕೇಳಿದ್ದರು. ಬುಧವಾರ ಲಂಚದ ಹಣ ಸ್ವೀಕರಿಸುವ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ತನಿಖೆ ಚುರುಕು:
ಲೋಕಾಯುಕ್ತ ಡಿಎಸ್ಪಿ ಸುರೇಶರೆಡ್ಡಿ ಎಂ.ಎಸ್. ಅವರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ಗಳಾದ ವಿ.ಎನ್. ಕಡಿ, ಮಲ್ಲಿಕಾರ್ಜುನ ಬಿ. ಬಿರಾದಾರ, ಎನ್.ಆರ್. ಖಿಲಾರೆ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದಾರೆ. ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಬಿ. ನಂದಗಾವಿ ಅವರ ನೇತೃತ್ವದಲ್ಲಿ ಮುಂದಿನ ತನಿಖೆ ಮುಂದುವರಿದಿದೆ.