ತಿರುವನಂತಪುರಂ (ಕೇರಳ): ಹೆತ್ತ ಕರಳಿಗೆ ಬೆಲೆ ಇಲ್ಲದ ಜಗತ್ತಿನಲ್ಲಿ, ಕಾಮದ ಸುಖಕ್ಕಾಗಿ ಹಸುಗೂಸೊಂದನ್ನು ಅತ್ಯಂತ ಕ್ರೂರವಾಗಿ ಹಿಂಸಿಸಿ ಕೊಂದ ಭೀಕರ ಘಟನೆಯೊಂದು ಕೇರಳದಲ್ಲಿ ಬೆಳಕಿಗೆ ಬಂದಿದೆ. ಕೇವಲ ಒಂದೂವರೆ ವರ್ಷದ ಮುಗ್ಧ ಮಗುವಿನ ಮೇಲೆ ನಿರಂತರ ದೈಹಿಕ ದೌರ್ಜನ್ಯ ನಡೆಸಿ, ಸಾವಿಗೆ ಕಾರಣವಾದ ಪಾಪಿ ತಾಯಿ ಹಾಗೂ ಆಕೆಯ ಪ್ರಿಯಕರನನ್ನು ಕೇರಳ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಮಗುವಿನ ಪುಟ್ಟ ದೇಹದ ಮೇಲೆ ಬರೋಬ್ಬರಿ 51 ಗಾಯಗಳು ಪತ್ತೆಯಾಗಿದ್ದು, ಇಡೀ ಸಮಾಜವೇ ತಲೆತಗ್ಗಿಸುವಂತೆ ಮಾಡಿದೆ.
ಕೇರಳದ ನೆಡುಮಂಗಾಡ್ ಪ್ರದೇಶದಲ್ಲಿ ಈ ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಮೇ 29 ರಂದು ಅರ್ಶಿದ್ ಎಂಬ ಒಂದೂವರೆ ವರ್ಷದ ಗಂಡು ಮಗು ನಿಗೂಢವಾಗಿ ಸಾವನ್ನಪ್ಪಿತ್ತು. ಮಗುವಿಗೆ ವಾಂತಿಯಾಗುತ್ತಿದ್ದು, ಅಸ್ವಸ್ಥನಾಗಿದ್ದಾನೆ ಎಂದು ನಂಬಿಸಲು ಯತ್ನಿಸಿದ ತಾಯಿಯ ಪ್ರಿಯಕರ ಆಷ್ಕರ್ ಎಂಬಾತ, ಮೊದಲು ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದನು. ಆದರೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ತಿರುವನಂತಪುರದ ಎಸ್ಎಟಿ (SAT) ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲೇ ಮಗು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು.
ಮಗುವಿನ ಸಾವು ಸಹಜವಾಗಿರಲಿಲ್ಲ ಎಂಬ ಅನುಮಾನದ ಮೇಲೆ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿದಾಗ ವೈದ್ಯರೇ ಬೆಚ್ಚಿಬಿದ್ದಿದ್ದಾರೆ. ಮಗುವಿನ ದೇಹದ ಮೇಲೆ ಬರೋಬ್ಬರಿ 51 ಹೊಸ ಮತ್ತು ಹಳೆಯ ಗಾಯದ ಗುರುತುಗಳಿದ್ದವು. ಮಗುವಿನ ಮೇಲೆ ದೀರ್ಘಕಾಲದಿಂದ ನಿರಂತರವಾಗಿ ವಿಕೃತ ದೈಹಿಕ ದೌರ್ಜನ್ಯ ಎಸಗುತ್ತಿರುವುದು ವೈದ್ಯಕೀಯ ವರದಿಯಿಂದ ದೃಢಪಟ್ಟಿದೆ.
”ನಮ್ಮ ಬಳಿ ಮಗು ಇರುವಾಗ ಯಾವುದೇ ಗಾಯಗಳಿರಲಿಲ್ಲ. ಆದರೆ ಈ ಪಾಪಿಗಳು ಮಗುವಿನ ದೇಹದ ಮೇಲೆ ಸಿಗರೇಟ್ನಿಂದ ಸುಟ್ಟು ವಿಕೃತಿ ಮೆರೆದಿದ್ದಾರೆ” ಎಂದು ಮಗುವಿನ ಅಜ್ಜ-ಅಜ್ಜಿ ಕಣ್ಣೀರಿಡುತ್ತಾ ಆಕ್ರೋಶ ಹೊರಹಾಕಿದ್ದಾರೆ. ಈ ಹಿಂದೆ ಮಗುವಿನ ಎರಡು ಕೈಗಳು ಮುರಿದಿದ್ದಾಗ, “ಮಗು ಆಟ ಆಡುವಾಗ ಕೆಳಗೆ ಬಿದ್ದಿದೆ” ಎಂದು ಆಷ್ಕರ್ ಸುಳ್ಳು ಕಥೆ ಕಟ್ಟಿದ್ದ ಎಂಬ ಆಘಾತಕಾರಿ ಸತ್ಯವೂ ತನಿಖೆಯಲ್ಲಿ ಬಯಲಾಗಿದೆ.
ಪೊಲೀಸ್ ತನಿಖೆಯ ವೇಳೆ ಮಗುವಿನ ತಾಯಿ ಅಖಿಲಾಳ ಪ್ರಿಯಕರ ಆಷ್ಕರ್ನ ಹಿನ್ನೆಲೆ ಅತ್ಯಂತ ಭಯಾನಕ ಎಂಬುದು ತಿಳಿದುಬಂದಿದೆ. ಆಷ್ಕರ್ನ ಮೊದಲ ಪತ್ನಿ ಅಮಿನಾಳ ಕುಟುಂಬಸ್ಥರು ಆತನ ಕ್ರೂರ ವರ್ತನೆಯನ್ನು ಬಿಚ್ಚಿಟ್ಟಿದ್ದಾರೆ:
ಆಷ್ಕರ್ ಈ ಹಿಂದೆ ತನ್ನ ಮೊದಲ ಪತ್ನಿಯನ್ನು ಸೀಲಿಂಗ್ ಫ್ಯಾನ್ಗೆ ನೇಣು ಹಾಕಿ ಕೊಲ್ಲಲು ಯತ್ನಿಸಿದ್ದನು.
ಆತನ ತೀವ್ರ ಹಲ್ಲೆಯಿಂದಾಗಿ ಮೊದಲ ಪತ್ನಿ ಬರೋಬ್ಬರಿ ಒಂದು ವರ್ಷ ಕಾಲ ಹಾಸಿಗೆ ಹಿಡಿಯುವಂತಾಗಿತ್ತು.
ವಿಶೇಷವೆಂದರೆ, ಆಷ್ಕರ್ ಮತ್ತು ಅಮಿನಾ ನಡುವಿನ ವಿಚ್ಛೇದನ ಪ್ರಕ್ರಿಯೆ ಇನ್ನೂ ಕಾನೂನಾತ್ಮಕವಾಗಿ ಪೂರ್ಣಗೊಂಡಿಲ್ಲ.
ತನ್ನದೇ ಕಂದಮ್ಮನನ್ನು ಬಲಿಗೊಟ್ಟ ಪಾಪಿ ತಾಯಿ ಅಖಿಲಾ ಮತ್ತು ಆಕೆಯ ಸಹವರ್ತಿ ಆಷ್ಕರ್ನನ್ನು ಪೊಲೀಸರು ಕಠಿಣ ಸೆಕ್ಷನ್ಗಳಡಿ ಬಂಧಿಸಿದ್ದಾರೆ. ಇವರ ಕ್ರೌರ್ಯದ ವಿಷಯ ತಿಳಿಯುತ್ತಿದ್ದಂತೆ ನೆಡುಮಂಗಾಡ್ ಪ್ರದೇಶದಲ್ಲಿ ಸಾರ್ವಜನಿಕರ ಆಕ್ರೋಶ ಕಟ್ಟೆಯೊಡೆದಿದೆ. ಜನ ಉದ್ರಿಕ್ತಗೊಂಡು ದಾಳಿ ನಡೆಸುವ ಮುನ್ಸೂಚನೆ ಅರಿತ ಪೊಲೀಸರು, ಆರೋಪಿಗಳನ್ನು ಸ್ಥಳ ಮಹಜರಿಗೆ ಹಾಗೂ ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆದೊಯ್ಯುವಾಗ ಭಾರೀ ಪೊಲೀಸ್ ಬಂದೋಬಸ್ತ್ ಕಲ್ಪಿಸಬೇಕಾಯಿತು.
ಸದ್ಯ ಪೊಲೀಸರು ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆದು ಕಠಿಣ ತನಿಖೆಗೆ ಒಳಪಡಿಸಿದ್ದು, ಹಸುಗೂಸನ್ನು ವಿಕೃತವಾಗಿ ಕೊಂದ ಈ ನರರಾಕ್ಷಸರಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.