ಬೆಂಗಳೂರು: ಕೆಂಪೇಗೌಡ ನಗರದ ಐತಿಹಾಸಿಕ ಹಿನ್ನೆಲೆಯುಳ್ಳ ಕೆಂಪಾಂಬುದಿ ಕೆರೆ ಇಂದು ಅಕ್ಷರಶಃ ಅವ್ಯವಸ್ಥೆಯ ಆಗರವಾಗಿದ್ದು, ಪುಂಡ-ಪೋಕರಿಗಳ ಅಡ್ಡೆಯಾಗಿ ಮಾರ್ಪಟ್ಟಿದೆ. ಕೆರೆಯ ಸುತ್ತಮುತ್ತಲಿನ ಪರಿಸರದಲ್ಲಿ ಅನೈತಿಕ ಚಟುವಟಿಕೆಗಳು ರಾಜಾರೋಷವಾಗಿ ನಡೆಯುತ್ತಿದ್ದು, ಸಾರ್ವಜನಿಕರ ಸುರಕ್ಷತೆ ಈಗ ಪ್ರಶ್ನಾರ್ಥಕ ಚಿಹ್ನೆಯಾಗಿದೆ.
ಕೆರೆಯ ದುಸ್ಥಿತಿಯ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ, ಸರ್ವ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ ಶಿವಕುಮಾರ್ ನಾಯ್ಕ್ ಅವರು ಕೆರೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಅಧಿಕಾರಿಗಳ ನಿರ್ಲಕ್ಷ್ಯವೇ ಕೆರೆಯ ಈ ದುಃಸ್ಥಿತಿಗೆ ನೇರ ಕಾರಣ ಎಂದು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾದಕ ದ್ರವ್ಯಗಳ ಅಡ್ಡೆ: ಕೆರೆಯ ಏರಿ ಹಾಗೂ ಉದ್ಯಾನವನದ ಮರೆ ಪ್ರದೇಶಗಳಲ್ಲಿ ಪುಂಡರು ರಾಜಾರೋಷವಾಗಿ ಗಾಂಜಾ ಮತ್ತು ಡ್ರಗ್ಸ್ ಸೇವನೆ ಮಾಡುತ್ತಿದ್ದಾರೆ. ಇದು ವಾಯುವಿಹಾರಿಗಳಲ್ಲಿ ಭೀತಿ ಹುಟ್ಟಿಸಿದೆ.
ಕೊಳಚೆ ನೀರಿನ ಮಿಶ್ರಣ: ರಾಜಕಾಲುವೆಯ ಕೊಳಚೆ ನೀರು ನೇರವಾಗಿ ಕೆರೆಗೆ ಸೇರುತ್ತಿದ್ದು, ಕೆರೆ ನೀರು ವಿಷಕಾರಿಯಾಗುವುದರ ಜೊತೆಗೆ ದುರ್ನಾತ ಬೀರುತ್ತಿದೆ.
ತ್ಯಾಜ್ಯದ ರಾಶಿ: ಕೆರೆಯ ದಡದಲ್ಲಿಯೇ ಕಸದ ವಿಲೇವಾರಿ ಮಾಡಲಾಗುತ್ತಿದ್ದು, ಐತಿಹಾಸಿಕ ಕೆರೆ ಪರಿಸರ ಮಾಲಿನ್ಯದ ಕೇಂದ್ರವಾಗಿದೆ.
ಮಹಿಳೆಯರ ಅಸುರಕ್ಷತೆ: ಪುಂಡರ ಹಾವಳಿ ಹಾಗೂ ಕಿರುಕುಳದಿಂದಾಗಿ ಮಹಿಳೆಯರು ಮತ್ತು ಮಕ್ಕಳು ಈ ಭಾಗದಲ್ಲಿ ಓಡಾಡಲು ಭಯಪಡುವಂತಾಗಿದೆ.
ಒಂದೊಮ್ಮೆ ವಾಯುವಿಹಾರಕ್ಕೆ ಮತ್ತು ವಿಶ್ರಾಂತಿಗೆ ಹೆಸರಾಗಿದ್ದ ಈ ಸುಂದರ ಕೆರೆ ಹಾಗೂ ಉದ್ಯಾನವನಕ್ಕೆ ಬರುವವರ ಸಂಖ್ಯೆ ಈಗ ಗಣನೀಯವಾಗಿ ಕುಸಿದಿದೆ. ಕೆರೆಯ ದುರ್ನಾತ ಮತ್ತು ಅಸುರಕ್ಷಿತ ವಾತಾವರಣದಿಂದಾಗಿ ಸಾರ್ವಜನಿಕರು ಕೆರೆಯ ಹತ್ತಿರ ಸುಳಿಯಲು ಹಿಂಜರಿಯುತ್ತಿದ್ದಾರೆ.
”ಐತಿಹಾಸಿಕ ಹಿನ್ನೆಲೆಯುಳ್ಳ ಕೆಂಪಾಂಬುದಿ ಕೆರೆ ಇಂದು ಮಾದಕ ವ್ಯಸನಿಗಳ ಅಡ್ಡೆಯಾಗುತ್ತಿರುವುದು ದುರದೃಷ್ಟಕರ. ತಕ್ಷಣವೇ ಇಲ್ಲಿ ಪೊಲೀಸ್ ಗಸ್ತು ಹೆಚ್ಚಿಸಬೇಕು ಮತ್ತು ಬಿಬಿಎಂಪಿ ಕೆರೆಯನ್ನು ನವೀಕರಿಸಬೇಕು.”
— ಶಿವಕುಮಾರ್ ನಾಯ್ಕ್, ಅಧ್ಯಕ್ಷರು, ಸರ್ವ ಸಂಘಟನೆಗಳ ಒಕ್ಕೂಟ
ಪೊಲೀಸ್ ಇಲಾಖೆ ತಕ್ಷಣವೇ ಎಚ್ಚೆತ್ತುಕೊಂಡು ಈ ಭಾಗದಲ್ಲಿ ‘ಪೊಲೀಸ್ ರೌಂಡಪ್’ ಬಿಗಿಗೊಳಿಸಬೇಕು. ಬಿಬಿಎಂಪಿ ಅಧಿಕಾರಿಗಳು ಕೆರೆಯ ಸ್ವಚ್ಛತೆಗೆ ಆದ್ಯತೆ ನೀಡಿ, ಹದಗೆಟ್ಟಿರುವ ಪರಿಸರವನ್ನು ಸರಿಪಡಿಸಬೇಕು ಎಂಬುದು ಸ್ಥಳೀಯ ನಿವಾಸಿಗಳ ಹಾಗೂ ಸಂಘಟನೆಗಳ ಪ್ರಬಲ ಒತ್ತಾಯವಾಗಿದೆ.
ವರದಿ: ಚಂದ್ರು ಸೂರ್ಯ