Police Roundup

ಪರಪ್ಪನ ಅಗ್ರಹಾರ ಜೈಲಿನಲ್ಲಿ ಹೈಟೆಕ್ ವಂಚನೆ: ಸುಪ್ರೀಂ ಕೋರ್ಟ್ ನಕಲಿ ಆದೇಶ, ಸುಳ್ಳು ಜಾತಿ ಪ್ರಮಾಣಪತ್ರ ಹಾಗೂ ಅಕ್ರಮ ಪರೋಲ್ ಹಗರಣದ ಕಿಂಗ್‌ಪಿನ್ ಎಂ. ಸೋಮಶೇಖರ್ ವಿರುದ್ಧ ಎಫ್‌ಐಆರ್!

Share News

ಬೆಂಗಳೂರು: ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್ ಹೆಸರಲ್ಲೇ ನಕಲಿ ಬಿಡುಗಡೆ ಆದೇಶ ಸೃಷ್ಟಿಸಿದ ಜಾಲ, ಅಕ್ರಮ ಪರೋಲ್ ಮಂಜೂರಾತಿ ಹಾಗೂ ನಕಲಿ ಜಾತಿ ಪ್ರಮಾಣಪತ್ರ ಬಳಸಿ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡಿದ್ದ ಕಾರಾಗೃಹ ಇಲಾಖೆಯ ಅಂದಿನ ಮುಖ್ಯ ಅಧೀಕ್ಷಕ ಎಂ. ಸೋಮಶೇಖರ್ ಮತ್ತು ಗ್ಯಾಂಗ್ ವಿರುದ್ಧ ಬೆಂಗಳೂರಿನ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಅಧಿಕೃತ ಎಫ್‌ಐಆರ್ (FIR) ದಾಖಲಾಗಿದೆ.

 

​ಕೇಂದ್ರ ಕಾರಾಗೃಹದ ಸಹಾಯಕ ಅಧೀಕ್ಷಕರಾದ ಕರ್ಣ ಬಿ. ಕ್ಷತ್ರಿಯ ಅವರು ನೀಡಿದ ದೂರಿನ ಮೇರೆಗೆ ಸದ್ಯ ತನಿಖೆ ತೀವ್ರಗೊಂಡಿದ್ದು, ಪ್ರಮುಖ ಆರೋಪಿ ಎಂ. ಸೋಮಶೇಖರ್ ಹಾಗೂ ಅವರ ಸಹಚರರಿಗೆ ಬಂಧನದ ಭೀತಿ ಎದುರಾಗಿದೆ.

 

​ಈ ಇಡೀ ಹಗರಣವು 1999ರ ಬ್ಯಾಚ್‌ನ ಗೆಜೆಟೆಡ್ ಅಧಿಕಾರಿ ಎಂ. ಸೋಮಶೇಖರ್ (ಕಾರಾಗೃಹ ಇಲಾಖೆಯ ಅಂದಿನ ಮುಖ್ಯ ಅಧೀಕ್ಷಕರು) ಮತ್ತು 2001ರ ಭೀಕರ ದರೋಡೆ ಹಾಗೂ ಕೊಲೆ ಪ್ರಕರಣದ ಕರಡುಗಟ್ಟಿದ ಶಿಕ್ಷಾಬಂಧಿ ಕೈದಿ ಶಂಕರ್ ಬಿನ್ ಆರ್ಮುಗಂ (ಶಿಕ್ಷಾ ಬಂದಿ ಸಂಖ್ಯೆ: 12503) ಎಂಬಿಬ್ಬರ ಅಪವಿತ್ರ ಮೈತ್ರಿಯ ಸುತ್ತ ಸುತ್ತುತ್ತದೆ.

 

ವಿಕ್ಟೋರಿಯಾ ಆಸ್ಪತ್ರೆಯಿಂದ ಪಲಾಯನ ಮತ್ತು ಮರುಬಂಧನ (2016):

2001ರ ಕೊಲೆ ಮತ್ತು ದರೋಡೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಖೈದಿ ಶಂಕರ್ ಆರ್ಮುಗಂ, ಚಿಕಿತ್ಸೆಯ ನೆಪದಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದಾಗ ಅಲ್ಲಿಂದ ತಪ್ಪಿಸಿಕೊಂಡಿದ್ದನು. ಈ ಬಗ್ಗೆ ಕಲಾಸಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತದನಂತರ 2016ರಲ್ಲಿ ಈತ ಆರ್‌ಆರ್ ನಗರದ ಗೋಪಾಲನ್ ಮಾಲ್‌ನಲ್ಲಿರುವ ಖಚಿತ ಮಾಹಿತಿ ಮೇರೆಗೆ, ಅಂದಿನ ಜೈಲು ಮುಖ್ಯ ಅಧೀಕ್ಷಕರು ಮತ್ತು ಸಿಸಿಬಿ (CCB) ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಈತನನ್ನು ಮರುಬಂಧಿಸಿದ್ದರು.

 

ಇಷ್ಟು ಕರಡುಗಟ್ಟಿದ ಇತಿಹಾಸವಿದ್ದರೂ ಜೈಲು ಅಧಿಕಾರಿಯಾಗಿದ್ದ ಎಂ. ಸೋಮಶೇಖರ್ ಅವರು ಖೈದಿ ಶಂಕರ್‌ನಿಗೆ ಕಾನೂನು ಬಾಹಿರವಾಗಿ ‘ತುರ್ತು ಪರೋಲ್’ ಮಂಜೂರು ಮಾಡುತ್ತಿದ್ದರು. ಸೋಮಶೇಖರ್ ಅವರು ಕೈದಿಯ ಕುಟುಂಬದವರೊಂದಿಗೆ ಅತ್ಯಾಪ್ತ ಒಡನಾಟ ಹೊಂದಿದ್ದು, ಶಾಪಿಂಗ್ ಮಾಲ್‌ಗಳಲ್ಲಿ ಜೊತೆಯಾಗಿ ಓಡಾಡುತ್ತಿರುವ ವೀಡಿಯೋ ಪುರಾವೆಗಳು ತನಿಖಾ ತಂಡಕ್ಕೆ ಲಭ್ಯವಾಗಿವೆ.

 

ಪ್ರಕರಣದ ಅತ್ಯಂತ ಗಂಭೀರ ಸ್ವರೂಪವೆಂದರೆ, 2018ರಲ್ಲಿ ಮಾನ್ಯ ಸುಪ್ರೀಂ ಕೋರ್ಟ್ ಹೆಸರಿನಲ್ಲಿ ಕ್ರಿಮಿನಲ್ ಅಪೀಲು ಸಂಖ್ಯೆ: 6447/2014 ರ ಅಡಿಯಲ್ಲಿ ನಕಲಿ (Fake) ಬಿಡುಗಡೆ ಆದೇಶದ ಪತ್ರವನ್ನು ಸೃಷ್ಟಿಸಲಾಗಿತ್ತು. ಈ ನಕಲಿ ದಾಖಲೆಯನ್ನು ಕಾರಾಗೃಹಕ್ಕೆ ಸಲ್ಲಿಸಿ, ಶಂಕರ್‌ನನ್ನು ಅಕ್ರಮವಾಗಿ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. ಇದಕ್ಕೆ ಅಧಿಕಾರಿ ಎಂ. ಸೋಮಶೇಖರ್ ಮತ್ತು ಇತರ ಸಿಬ್ಬಂದಿಗಳು ನೇರವಾಗಿ ಸಹಕರಿಸಿರುವ ಶಂಕೆ ದಟ್ಟವಾಗಿದೆ.

 

ಅಧಿಕಾರಿ ಎಂ. ಸೋಮಶೇಖರ್ ಕೇವಲ ಜೈಲಿನಲ್ಲಿ ಮಾತ್ರವಲ್ಲ, ಇಲಾಖೆಗೆ ಸೇರ್ಪಡೆಯಾಗುವಾಗಲೇ ದೊಡ್ಡ ವಂಚನೆ ಎಸಗಿರುವುದು ಬಯಲಾಗಿದೆ.

​ದಾಖಲೆಗಳ ತಿದ್ದುವಿಕೆ: ಸೋಮಶೇಖರ್ ಅವರು 1 ರಿಂದ 4 ನೇ ತರಗತಿಯ ಅಡ್ಮಿಷನ್ ರಿಜಿಸ್ಟರ್‌ನಲ್ಲಿ ‘ಕುರುಬ’ (ಹಿಂದುಳಿದ ವರ್ಗ) ಎಂದು ನಮೂದಿಸಿಕೊಂಡಿದ್ದರು. ಆದರೆ, 5 ನೇ ತರಗತಿಯಿಂದ ಅದನ್ನು ‘ಕಾಡು ಕುರುಬ’ (ಪರಿಶಿಷ್ಟ ಪಂಗಡ – ST) ಎಂದು ತಿದ್ದಿ ಸುಳ್ಳು ದಾಖಲೆ ಸೃಷ್ಟಿಸಿದ್ದರು.

​ಅಕ್ರಮ ನೇಮಕಾತಿ: ಈ ನಕಲಿ ಜಾತಿ ಪ್ರಮಾಣಪತ್ರದ ಆಧಾರದ ಮೇಲೆ 1999 ರಲ್ಲಿ ‘ST ಮೀಸಲಾತಿ’ ಅಡಿಯಲ್ಲಿ ಗೆಜೆಟೆಡ್ ಅಧಿಕಾರಿಯಾಗಿ ಇಲಾಖೆಗೆ ಅಕ್ರಮವಾಗಿ ಆಯ್ಕೆಯಾಗಿದ್ದರು.

 

​ಈ ಇಡೀ ಹಗರಣವನ್ನು ಮುಚ್ಚಿಹಾಕಲು ಮತ್ತು ತನಿಖೆಯನ್ನು ವಿಳಂಬಗೊಳಿಸಲು ಹಲವು ಉನ್ನತ ಅಧಿಕಾರಿಗಳು ಪ್ರಭಾವ ಬೀರಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ:

ಅಧಿಕಾರಿಗಳ ಹೆಸರು ಮತ್ತು ಹುದ್ದೆ ತನಿಖೆಯಲ್ಲಿನ ಲೋಪಗಳು / ಕೇಳಿಬಂದಿರುವ ಗಂಭೀರ ಆರೋಪಗಳು

(ಅಂದಿನ ಬೆಂಗಳೂರು ಜಿಲ್ಲಾಧಿಕಾರಿ) ಸೋಮಶೇಖರ್ ಅವರನ್ನು ರಕ್ಷಿಸುವ ಉದ್ದೇಶದಿಂದ ಸ್ವತಃ ತನಿಖೆ ನಡೆಸದೇ, ದೂರುದಾರರಿಗೇ ಸಾಕ್ಷಿ ಒದಗಿಸುವಂತೆ ಹೇಳಿ ತನಿಖೆಯನ್ನು ಉದ್ದೇಶಪೂರ್ವಕವಾಗಿ ವಿಳಂಬಗೊಳಿಸಿದರು.

ಸತ್ಯಾಂಶಗಳು (ಐಪಿಎಸ್ ಅಧಿಕಾರಿ) ದೂರುದಾರರಿಗೆ ದಾಖಲೆ ಒದಗಿಸಲು ತಾಕೀತು ಮಾಡಿ, ಜಿಲ್ಲಾಧಿಕಾರಿಗಳ ಆಜ್ಞೆಯಂತೆ ತನಿಖೆಯನ್ನು ಸರಿಯಾಗಿ ನಡೆಸದೇ ಕೇವಲ ಮೇಲ್ನೋಟಕ್ಕೆ ಮುಗಿಸಿ ಕರ್ತವ್ಯ ಲೋಪ ಎಸಗಿದ್ದಾರೆ.

 

ತನಿಖೆ ನಡೆಸಬೇಕಾಗಿದ್ದ ಉನ್ನತ ಅಧಿಕಾರಿಗಳಾದ ಅರುಣ್ ಚಕ್ರವರ್ತಿ ಮತ್ತು ದರನಿದೇವಿ ಅವರು ಪರಿಶಿಷ್ಟ ಜಾತಿಗೆ (SC) ಸೇರಿದವರಾಗಿದ್ದರೂ, ಎಸ್.ಟಿ ಮೀಸಲಾತಿಯ ದುರುಪಯೋಗದ ವಿರುದ್ಧ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸದೆ ಆರೋಪಿಯನ್ನು ರಕ್ಷಿಸಲು ಯತ್ನಿಸಿದ್ದಾರೆ ಎಂದು ದೂರುದಾರರು ಆಕ್ರೋಶ ಹೊರಹಾಕಿದ್ದಾರೆ.

 

ಸಾರ್ವಜನಿಕರ ನಿರಂತರ ದೂರು ಹಾಗೂ ಇಲಾಖೆಯ ಆಂತರಿಕ ತನಿಖೆಯ ವರದಿಗಳ ಆಧಾರದ ಮೇಲೆ ಸದ್ಯ ಎಫ್‌ಐಆರ್ ದಾಖಲಾಗಿದ್ದು, ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಸೃಷ್ಟಿಸಿದ ಜಾಲ ಮತ್ತು ಅದಕ್ಕೆ ಸಹಕರಿಸಿದ ಜೈಲು ಅಧಿಕಾರಿಗಳ ವಿರುದ್ಧದ ತನಿಖೆ ತೀವ್ರಗೊಂಡಿದೆ. ತಲೆಮರೆಸಿಕೊಂಡಿರುವ ಖೈದಿ ಶಂಕರ್ ಹಾಗೂ ವಂಚಕ ಅಧಿಕಾರಿ ಎಂ. ಸೋಮಶೇಖರ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

 

​ವಿಶೇಷ ತನಿಖಾ ವರದಿ: ಪರಶಿವ ಧನಗೂರು (Udayatv ಶಿವು)

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin