ಕವರ್ಧ (ಛತ್ತೀಸ್ಗಢ): ಛತ್ತೀಸ್ಗಢದ ಕವರ್ಧ ಜಿಲ್ಲೆಯ ಹೊಲವೊಂದರಲ್ಲಿ ಗೋಣಿ ಚೀಲದಲ್ಲಿ ಪತ್ತೆಯಾಗಿದ್ದ ಶವದ ನಿಗೂಢ ರಹಸ್ಯವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ತನ್ನ ಆಕ್ಷೇಪಾರ್ಹ ವೀಡಿಯೋ ಇಟ್ಟುಕೊಂಡು ನಿರಂತರವಾಗಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಪ್ರಿಯಕರನನ್ನು ಮಹಿಳೆಯೊಬ್ಬಳು ಪತಿ ಹಾಗೂ ಮೈದುನನೊಂದಿಗೆ ಸೇರಿ ಭೀಕರವಾಗಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರೂ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.
ಕವರ್ಧ ಜಿಲ್ಲೆಯ ಪಾಂಡಾತರೈ ಪೊಲೀಸ್ ಠಾಣಾ ವ್ಯಾಪ್ತಿಯ ಸೋಂಢಾ ಗ್ರಾಮದ ಹೊಲವೊಂದರಲ್ಲಿ ಇತ್ತೀಚೆಗೆ ಗೋಣಿ ಚೀಲದಲ್ಲಿ ಸುತ್ತಿರುವ ಸ್ಥಿತಿಯಲ್ಲಿ ಯುವಕನೊಬ್ಬನ ಶವ ಪತ್ತೆಯಾಗಿತ್ತು. ಮೃತ ಯುವಕನನ್ನು ಬಯಹಾಸರಿ ಗ್ರಾಮದ ನಿವಾಸಿ ಕೋಮಲ್ ವರ್ಮಾ (23) ಎಂದು ಗುರುತಿಸಲಾಗಿತ್ತು. ಮೇ 28 ರಂದು ಮನೆಯಿಂದ ಹೊರಟಿದ್ದ ಕೋಮಲ್ ವರ್ಮಾ ನಾಪತ್ತೆಯಾಗಿದ್ದ ಕುರಿತು ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಯುವಕನ ಮೊಬೈಲ್ ಕಾಲ್ ಡೇಟಾ ರೆಕಾರ್ಡ್ (CDR) ಆಧರಿಸಿ ತನಿಖೆ ನಡೆಸಿದಾಗ, ಮಂದಾಕಿನಿ ವರ್ಮಾ ಎಂಬಾಕೆಯ ಸಂಪರ್ಕದಲ್ಲಿರುವುದು ತಿಳಿದುಬಂದಿದೆ. ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಭೀಕರ ಹತ್ಯೆಯ ರಹಸ್ಯ ಬಯಲಾಗಿದೆ.
ಪೊಲೀಸ್ ವಿಚಾರಣೆಯ ವೇಳೆ ಆರೋಪಿ ಮಹಿಳೆ ಮಂದಾಕಿನಿ ಆಘಾತಕಾರಿ ಸತ್ಯವನ್ನು ಒಪ್ಪಿಕೊಂಡಿದ್ದಾಳೆ. ಮೃತ ಕೋಮಲ್ ವರ್ಮಾ ಹಾಗೂ ಆಕೆಯ ನಡುವೆ ಅಕ್ರಮ ಸಂಬಂಧವಿತ್ತು ಎನ್ನಲಾಗಿದೆ. ಈ ನಡುವೆ ಕೋಮಲ್ ಬಳಿ ಮಹಿಳೆಗೆ ಸಂಬಂಧಿಸಿದ ಕೆಲವು ಆಕ್ಷೇಪಾರ್ಹ ವೀಡಿಯೋ ಹಾಗೂ ಫೋಟೋಗಳಿದ್ದವು. ಇವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಸುತ್ತಿದ್ದ ಆತ, ತನಗೊಲಿದಾಗಲೆಲ್ಲಾ ದೈಹಿಕ ಸಂಬಂಧ ಹೊಂದುವಂತೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಪೀಡಿಸುತ್ತಿದ್ದನು. ಈತನ ಕಿರುಕುಳ ಮತ್ತು ಬ್ಲ್ಯಾಕ್ಮೇಲ್ ತಡೆಯಲು ಸಾಧ್ಯವಾಗದ ಮಹಿಳೆ, ಆತನನ್ನು ಸಂಪೂರ್ಣವಾಗಿ ಮುಗಿಸಲು ಸ್ಕೆಚ್ ಹಾಕಿದ್ದಾಳೆ.
ಯೋಜನೆಯಂತೆ ಘಟನೆ ನಡೆದ ರಾತ್ರಿಯೂ ಕೋಮಲ್ ದೈಹಿಕ ಸಂಬಂಧಕ್ಕಾಗಿ ಒತ್ತಾಯಿಸಿ ಕರೆ ಮಾಡಿದಾಗ, ಮಹಿಳೆ ಆತನನ್ನು ತನ್ನದೇ ಮನೆಗೆ ಬರುವಂತೆ ನಂಬಿಸಿ ಕರೆಸಿಕೊಂಡಿದ್ದಾಳೆ. ಕೋಮಲ್ ಮನೆಗೆ ಬರುತ್ತಿದ್ದಂತೆಯೇ ಜಾಗರೂಕರಾಗಿದ್ದ ಮಹಿಳೆ, ಆತನ ತಲೆಗೆ ಕಬ್ಬಿಣದ ರಾಡ್ನಿಂದ ಭೀಕರವಾಗಿ ಹೊಡೆದಿದ್ದಾಳೆ. ಏಟಿನ ತೀವ್ರತೆಗೆ ತಲೆಬುರುಡೆ ಒಡೆದು ಆತ ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಕೊನೆಯುಸಿರೆಳೆದಿದ್ದಾನೆ.
ಹತ್ಯೆ ನಡೆದ ಬಳಿಕ ಮಹಿಳೆಯ ಪತಿ ಮತ್ತು ಮೈದುನ ಶವವನ್ನು ಸಾಗಿಸಲು ಹಾಗೂ ಸಾಕ್ಷ್ಯನಾಶ ಮಾಡಲು ಕೈಜೋಡಿಸಿದ್ದಾರೆ. ಮೂವರೂ ಸೇರಿ ರಕ್ತಸಿಕ್ತವಾಗಿದ್ದ ಕೋಮಲ್ ಶವವನ್ನು ಗೋಣಿ ಚೀಲದಲ್ಲಿ ತುಂಬಿ, ತಡರಾತ್ರಿ ಸೋಂಢಾ ಗ್ರಾಮದ ಬಳಿಯ ನಿರ್ಜನ ಹೊಲವೊಂದರಲ್ಲಿ ಎಸೆದು ಪರಾರಿಯಾಗಿದ್ದರು.
ಪ್ರಸ್ತುತ ಮಂದಾಕಿನಿ ವರ್ಮಾ, ಆಕೆಯ ಪತಿ ಹಾಗೂ ಮೈದುನನನ್ನು ಬಂಧಿಸಿರುವ ಪಾಂಡಾತರೈ ಪೊಲೀಸರು, ಹತ್ಯೆಗೆ ಬಳಸಿದ ಕಬ್ಬಿಣದ ರಾಡ್ ಹಾಗೂ ಶವ ಸಾಗಿಸಲು ಬಳಸಿದ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಮೂವರೂ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.