ಸಿದ್ದಾಪುರ: ತಾಲೂಕಿನ ಮಾವಿನಗುಂಡಿ ಶಾಖೆಯ ಹಲಗೇರಿ ಸಮೀಪ ಕಡವೆ ಮತ್ತು ಬರ್ಕ ಪ್ರಾಣಿಗಳನ್ನು ಬೇಟೆಯಾಡಿ ವಾಹನದಲ್ಲಿ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಶುಕ್ರವಾರ ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಹುಸೂರು ಗ್ರಾಮದ ಸಮೀಪದ ಕಚ್ಚಾರಸ್ತೆಯಲ್ಲಿ ಮೃತಪಟ್ಟ ಹೆಣ್ಣು ಕಡವೆ ಹಾಗೂ ಒಂದು ಗಂಡು ಬರ್ಕವನ್ನು ಅಕ್ರಮವಾಗಿ ಸಾಗಿಸುತ್ತಿರುವುದನ್ನು ಖಚಿತಪಡಿಸಿಕೊಂಡ ಅರಣ್ಯ ಇಲಾಖೆ ತಂಡವು ದಾಳಿ ನಡೆಸಿದೆ.
ಬಂಧಿತ ಆರೋಪಿಗಳನ್ನು ಹುಸೂರಿನ ವಿರೇಂದ್ರ ಮಾರುತಿ ನಾಯ್ಕ, ಕುಂಬಾರಕುಳಿಯ ಶಿವಾನಂದ ಮಹಾಬಲೇಶ್ವರ ನಾಯ್ಕ ಹಾಗೂ ಸುಂಕತ್ತಿಯ ವಾಸುದೇವ ಈರ ನಾಯ್ಕ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ವನ್ಯಜೀವಿಗಳ ಕಳೇಬರ, ಸಾಗಣೆಗೆ ಬಳಸಿದ್ದ ವಾಹನ ಹಾಗೂ ಬೇಟೆಯಾಡಲು ಬಳಸಿದ್ದ ಬಂದೂಕನ್ನು ಅರಣ್ಯ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಸ್ಥಳಕ್ಕೆ ದಾಂಡೇಲಿಯ ವನ್ಯಜೀವಿ ವಿಧಿವಿಜ್ಞಾನ ತಜ್ಞ (Wildlife Forensic Expert) ಮಧುಸೂದನ ಎಸ್. ಭೇಟಿ ನೀಡಿ ತನಿಖೆ ನಡೆಸಿದ್ದಾರೆ.
ಶಿರಸಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಹೆಚ್. ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪವಿತ್ರಾ ಯು. ಜೆ. ಅವರ ಮಾರ್ಗದರ್ಶನದಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆದಿದೆ.
ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಸಿಬ್ಬಂದಿ:
ವಲಯ ಅರಣ್ಯಾಧಿಕಾರಿ: ಅಜಯಕುಮಾರ ಎಂ. ಎಸ್.
ಉಪ ವಲಯ ಅರಣ್ಯಾಧಿಕಾರಿಗಳು: ರಾಘವೇಂದ್ರ ಆರ್.ಡಿ., ಗುಲಶೀರ್ ಎಂ., ಗುಡದಯ್ಯ ಅಪ್ಪಿನಬೈಲ್, ಅಡಿವೆಪ್ಪ ಸಂಗಪ್ಪಗೌಡ್ರು.
ವನಪಾಲಕರು: ಹನುಮಂತಪ್ಪ ಬಿ. ಕಿಲಾರಿ, ಮಾರುತಿ ನಾಯ್ಕ, ನೀಲಗಿರಿ ಶಿವಬಸಣ್ಣನವರ, ಅಶೋಕ ಎಲ್.ಬಿ., ವೆಂಕಟೇಶ ಪೇಟಿಮಠ.
ವಾಹನ ಚಾಲಕರು: ಗಣಪತಿ ಹಾಗೂ ಶೇಖರ್.