ಹುಣಸೂರು: ನಗರದ ಮುಖ್ಯ ರಸ್ತೆಯಲ್ಲಿ ಕೊಳಚೆ ನೀರು ಹರಿಯುವ ಜಾಗದಲ್ಲಿ ಬೃಹತ್ ಗುಂಡಿ ತೆಗೆದು, ತಿಂಗಳುಗಳಿಂದ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದ ಹೆದ್ದಾರಿ ಕಾಮಗಾರಿಯು ಮಾಧ್ಯಮಗಳ ಸುದ್ದಿಯ ಬೆನ್ನಲ್ಲೇ ಕೊನೆಗೂ ಪುನಾರಂಭಗೊಂಡಿದೆ. ಆದರೆ, ಸದ್ಯ ನಡೆಯುತ್ತಿರುವ ತುರ್ತು ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳದಿದ್ದರೆ ಮುಂದೆ ಭಾರಿ ಅನಾಹುತ ಸೃಷ್ಟಿಯಾಗಲಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಗುತ್ತಿಗೆದಾರರು ಮುಖ್ಯ ರಸ್ತೆಯ ಚರಂಡಿ ಹಾಗೂ ಕೊಳಚೆ ನೀರು ಹರಿಯುವ ಪ್ರದೇಶದಲ್ಲಿ ದೊಡ್ಡ ಗುಂಡಿ ತೋಡಿ, ಕಳೆದೊಂದು ತಿಂಗಳಿಂದ ಯಾವುದೇ ಪ್ರಗತಿ ಇಲ್ಲದೆ ಹಾಗೇ ಬಿಟ್ಟಿದ್ದರು. ಇದರಿಂದಾಗಿ ಹುಣಸೂರು ನ್ಯಾಯಾಲಯದ (ಕೋರ್ಟ್) ಆವರಣ, ತೋಟಗಾರಿಕೆ ಇಲಾಖೆ ಕಚೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಲೀನ ನೀರು ನಿಂತು ಭಾರಿ ದುರ್ವಾಸನೆ ಹರಡಿತ್ತು. ಈ ಭಾಗದ ನಿವಾಸಿಗಳು ಹಾಗೂ ದಿನವಿಡೀ ವ್ಯಾಪಾರ ನಡೆಸುವ ಬೀದಿಬದಿ ವ್ಯಾಪಾರಿಗಳು ವಾಸನೆ ತಡೆಯಲಾರದೆ ತೀವ್ರ ನರಕಯಾತನೆ ಅನುಭವಿಸುತ್ತಿದ್ದರು.
ಈ ಗಂಭೀರ ಸಮಸ್ಯೆಯ ಕುರಿತು ಮಾಧ್ಯಮಗಳು ಸಾರ್ವಜನಿಕರ ಧ್ವನಿಯಾಗಿ ವಿಸ್ತೃತ ವರದಿ ಪ್ರಕಟಿಸುತ್ತಿದ್ದಂತೆ ಎಚ್ಚೆತ್ತ ಹೆದ್ದಾರಿ ರಸ್ತೆ ಕಾಮಗಾರಿ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿ ಶನಿವಾರದಿಂದ ಸ್ಥಳದಲ್ಲಿ ಕಾಮಗಾರಿಯನ್ನು ತ್ವರಿತವಾಗಿ ಪ್ರಾರಂಭಿಸಿದ್ದಾರೆ.
ಸ್ಥಳದಲ್ಲಿ ಅತ್ಯಂತ ಬೃಹತ್ ಪ್ರಮಾಣದಲ್ಲಿ ಕೊಳಚೆ ನೀರು ಹರಿಯುವುದರಿಂದ ಇಲ್ಲಿನ ಡ್ರೈನೇಜ್ ಹಾಗೂ ಪೈಪ್ಲೈನ್ ಕಾಮಗಾರಿ ಅತ್ಯಂತ ಕ್ರಮಬದ್ಧವಾಗಿ ಮತ್ತು ವೈಜ್ಞಾನಿಕವಾಗಿ ನಡೆಯಬೇಕಿದೆ. ಆದರೆ, ಪ್ರಸ್ತುತ ಮಾಧ್ಯಮಗಳ ಒತ್ತಡಕ್ಕೆ ಮಣಿದು ಗಡಿಬಿಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿ, ಪೈಪ್ಗಳನ್ನು ಅಳವಡಿಸುವಾಗ ಸರಿಯಾದ ಮುನ್ನೆಚ್ಚರಿಕೆ ವಹಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈಗ ಜಾರಿಯಾಗುತ್ತಿರುವ ಪೈಪ್ಲೈನ್ ಕಾಮಗಾರಿಯನ್ನು ಸರಿಯಾಗಿ ನಿರ್ವಹಿಸದಿದ್ದರೆ, ಮುಂದಿನ ದಿನಗಳಲ್ಲಿ ರಸ್ತೆಯ ಮಧ್ಯದಲ್ಲೇ ಕೊಳಚೆ ನೀರು ಜಿನುಗಿ (ಲೀಕೇಜ್) ಇಡೀ ರಸ್ತೆ ಹಾಳಾಗುವ ಸಾಧ್ಯತೆ ದಟ್ಟವಾಗಿದೆ. ಆದ್ದರಿಂದ, ಹುಣಸೂರು ನಗರಸಭೆ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಈ ಕಳಪೆ ಕಾಮಗಾರಿಗೆ ಬ್ರೇಕ್ ಹಾಕಿ, ಗುಣಮಟ್ಟ ಕಾಯ್ದುಕೊಳ್ಳುವಂತೆ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಸಾರ್ವಜನಿಕರು ತೀವ್ರ ಒತ್ತಾಯ ಹೂಡಿದ್ದಾರೆ.