Police Roundup

4,500 ಕೋಟಿ ವಂಚನೆ ಪ್ರಕರಣ: ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ಸಿಐಡಿ ವಶಕ್ಕೆ; ಸಿನಿಮಾ ಸ್ಟಾರ್‌ಗಳಿಗೂ ನೋಟಿಸ್ ಭೀತಿ!

Share News

ಬೆಳಗಾವಿ: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಬರೋಬ್ಬರಿ 4,500 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ‘ಶಿವಂ ಅಸೋಸಿಯೇಟ್ಸ್’ ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣನವರ್‌ನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ತನಿಖೆಯ ವೇಳೆ ಸಂಸ್ಥೆಯು ನಡೆಸಿರುವ ಕೋಟಿ ಕೋಟಿ ರೂಪಾಯಿಯ ವಂಚನೆ ಸಾಕ್ಷ್ಯ ಸಮೇತ ಸಾಬೀತಾಗಿದೆ ಎಂದು ಸಿಐಡಿ ಡಿಐಜಿಪಿ ಡಾ. ಭೀಮಾಶಂಕರ್ ಗುಳೇದ್ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸ್ಫೋಟಕ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ.

 

ಶಿವಂ ಅಸೋಸಿಯೇಟ್ಸ್ ಸಂಸ್ಥೆಯ ಮೇಲೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯಿಂದ ಜಂಟಿ ದಾಳಿ ನಡೆದು, ಎಫ್‌ಐಆರ್ ದಾಖಲಾದ ಬಳಿಕವೂ ಸಾರ್ವಜನಿಕರು ಮತ್ತದೇ ಸಂಸ್ಥೆಗೆ 5 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ. ಸಾರ್ವಜನಿಕರು ಇನ್ಮುಂದೆಯಾದರೂ ಇಂತಹ ವಂಚನೆಗಳಿಗೆ ಬಲಿಬೀಳದೆ ಎಚ್ಚೆತ್ತುಕೊಳ್ಳಲಿ ಎಂಬ ಕಾರಣಕ್ಕೆ ಸಿಐಡಿ ಈ ಪತ್ರಿಕಾಗೋಷ್ಠಿ ನಡೆಸಿ ಜಾಗೃತಿ ಮೂಡಿಸಿದೆ.

 

ಸಿಐಡಿ ಡಿಐಜಿಪಿ ನೀಡಿರುವ ಮಾಹಿತಿ ಪ್ರಕಾರ, ಆರೋಪಿ ಶಿವಾನಂದ ನೀಲಣ್ಣವರ್ ಈವರೆಗೆ ಸುಮಾರು 40,700 ಹೂಡಿಕೆದಾರರಿಂದ ಒಟ್ಟು 2,400 ಕೋಟಿ ರೂಪಾಯಿ ಸಂಗ್ರಹಿಸಿದ್ದಾನೆ. ಈ ಪೈಕಿ ಬಹುಪಾಲು ಹಣವನ್ನು ಸಾರ್ವಜನಿಕರಿಗೆ ಹಿಂದಿರುಗಿಸಿದ್ದಾನೆ. ಹೊಸದಾಗಿ ಬರುತ್ತಿದ್ದ ಹೂಡಿಕೆದಾರರ ಹಣವನ್ನು ಹಳಬರಿಗೆ ಬಡ್ಡಿಯ ರೂಪದಲ್ಲಿ ಹಂಚಲಾಗುತ್ತಿತ್ತು. ಆದರೆ, ಹೊಸದಾಗಿ ಸಂಗ್ರಹವಾಗುತ್ತಿದ್ದ ಹಣಕ್ಕಿಂತ ಹಳಬರಿಗೆ ಕೊಡಬೇಕಾದ ಬಡ್ಡಿಯ ಮೊತ್ತವೇ ಹೆಚ್ಚಾದಾಗ ಇಡೀ ಪೊಂಜಿ ವ್ಯವಸ್ಥೆ ಕುಸಿದು ಬಿದ್ದು, ವಂಚನೆಯ ರಹಸ್ಯ ಬಯಲಾಗಿದೆ.

 

ಸಂಗ್ರಹಿಸಿದ ಹಣದಲ್ಲಿ 540 ಕೋಟಿ ರೂಪಾಯಿಯನ್ನು ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಲಾಗಿದ್ದು, ಅದರಲ್ಲಿ 170 ಕೋಟಿ ರೂಪಾಯಿ ನಷ್ಟ ಮಾಡಿಕೊಳ್ಳಲಾಗಿದೆ. ಸದ್ಯದ ತನಿಖೆಯಲ್ಲಿ 660 ಕೋಟಿ ರೂ. ಕೊರತೆ ಕಂಡುಬಂದಿದ್ದು, ಇದರಲ್ಲಿ 330 ಕೋಟಿ ರೂ. ರಿಕವರಿ ಮಾಡಬಹುದು ಎಂದು ಅಂದಾಜಿಸಲಾಗಿದೆ. ಮಾಲೀಕ ನೀಲಣ್ಣವರ್ ಕಂಪನಿಯಿಂದ ಕಾನೂನುಬಾಹಿರವಾಗಿ 55 ಕೋಟಿ ರೂ. ಹಣವನ್ನು ತನ್ನ ವೈಯಕ್ತಿಕ ಖಾತೆಗೆ ವರ್ಗಾಯಿಸಿಕೊಂಡಿದ್ದಾನಲ್ಲದೆ, ಪ್ರಕರಣದಲ್ಲಿ ಮತ್ತೊಬ್ಬ ಪಾಲುದಾರನೂ ಶಾಮೀಲಾಗಿದ್ದಾನೆ.

 

ಆರೋಪಿಯಿಂದ ಈಗಾಗಲೇ 5 ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಲಾಗಿದ್ದು, ಸಂಸ್ಥೆಯ ಹಣದಲ್ಲಿ ಖರೀದಿಸಲಾಗಿದ್ದ ಇನ್ನುಳಿದ 11 ವೋಲ್ವೋ XC90 ಐಷಾರಾಮಿ ಕಾರುಗಳನ್ನು ಶೀಘ್ರದಲ್ಲೇ ವಶಪಡಿಸಿಕೊಳ್ಳಲಾಗುವುದು ಎಂದು ಸಿಐಡಿ ತಿಳಿಸಿದೆ. ಇನ್ನು ತನಿಖೆಯ ವೇಳೆ ಒಟ್ಟು 30 ಬ್ಯಾಂಕ್ ಖಾತೆಗಳು ಪತ್ತೆಯಾಗಿದ್ದು, ಇವುಗಳಲ್ಲಿ 7 ಖಾತೆಗಳಲ್ಲಿ ಭಾರಿ ಪ್ರಮಾಣದ ಹಣ ವರ್ಗಾವಣೆಯಾಗಿದೆ. ಕೇವಲ ಒಂದೇ ಒಂದು ಬ್ಯಾಂಕ್ ಖಾತೆಯಲ್ಲಿ ಬರೋಬ್ಬರಿ 36,200 ಪುಟಗಳಷ್ಟು ದೀರ್ಘಾವಧಿಯ ವಹಿವಾಟಿನ ದಾಖಲೆ ಪತ್ತೆಯಾಗಿದೆ. ಈ ಸಂಸ್ಥೆಯಿಂದ ಸಿನಿಮಾ ಸ್ಟಾರ್‌ಗಳಿಗೆ ಹಣ ಸಂದಾಯವಾಗಿರುವ ಶಂಕೆ ಇದ್ದು, ಸಾಕ್ಷ್ಯ ಸಿಕ್ಕರೆ ಸಿನೆಮಾ ತಾರೆಯರಿಗೂ ನೋಟಿಸ್ ನೀಡಿ ವಿಚಾರಣೆಗೆ ಕರೆಯಲಾಗುವುದು ಎಂದು ಡಿಐಜಿಪಿ ಎಚ್ಚರಿಸಿದ್ದಾರೆ.

 

​ಈ ವಂಚನೆಯ ಜಾಲ ಪಕ್ಕದ ಮಹಾರಾಷ್ಟ್ರ ರಾಜ್ಯದಲ್ಲೂ ಭಾರಿ ಪ್ರಮಾಣದಲ್ಲಿ ಹರಡಿದ್ದು, ಅಲ್ಲಿ ಅತಿ ಹೆಚ್ಚು ಹೂಡಿಕೆ ಮಾಡಲಾಗಿದೆ. ಹೀಗಾಗಿ ಮಹಾರಾಷ್ಟ್ರ ಪೊಲೀಸರ ಸಹಕಾರದೊಂದಿಗೆ ತನಿಖೆಯನ್ನು ತೀವ್ರಗೊಳಿಸಲಾಗಿದೆ. ಇನ್ನು, ಈ ಹಿಂದೆ ಹೂಡಿಕೆದಾರರಿಗೆ ನಿಯಮಬಾಹಿರವಾಗಿ ಹೋಗಿರುವ 400 ಕೋಟಿ ರೂ. ಹೆಚ್ಚುವರಿ ಹಣವನ್ನು ವಾಪಸ್ ಪಡೆದು ಬಾಕಿ ಉಳಿದಿರುವ ಹೂಡಿಕೆದಾರರಿಗೆ ಹಂಚಲು ಸಿಐಡಿ ನಿರ್ಧರಿಸಿದೆ. ಸದ್ಯ ರಿಕವರಿ ಮಾಡಲಾಗುವ ಹಣವನ್ನು ‘ಬಡ್ಸ್’ (BUDS) ಕಾಯ್ದೆ ಮುಖ್ಯಸ್ಥರಾದ ಆದಿತ್ಯ ಆಮ್ಲಾನ್ ಬಿಸ್ವಾಸ್ ಅವರಿಗೆ ಹಸ್ತಾಂತರಿಸಲಾಗುವುದು. ತದನಂತರ ಅವರು ಕಾನೂನು ಪ್ರಕ್ರಿಯೆಗಳ ಮೂಲಕ ಸಾರ್ವಜನಿಕರಿಗೆ ಹಣವನ್ನು ವಾಪಸ್ ಮಾಡಲಿದ್ದಾರೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.

 

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin