ಜೈಪುರ: ಮದುವೆಯ ಸಂಭ್ರಮದಲ್ಲಿದ್ದ ಕುಟುಂಬವೊಂದರಲ್ಲಿ ವಿಧಿಯ ಕ್ರೂರ ಆಟದಿಂದಾಗಿ ಮರಣದ ಕತ್ತಲು ಆವರಿಸಿದೆ. ವಿವಾಹ ಪೂರ್ವ (ಪ್ರಿ-ವೆಡ್ಡಿಂಗ್) ಫೋಟೊಶೂಟ್ ಹಮ್ಮಿಕೊಂಡಿದ್ದ ಜೋಡಿಯ ಆಸೆಗೆ ಸರೋವರವೊಂದು ಯಮನಂತೆ ಎರಗಿದ್ದು, ಕಣ್ಣೆದುರೇ ವರ ನೀರು ಪಾಲಾಗಿರುವ ಹೃದಯವಿದ್ರಾವಕ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ರಾಜಸ್ಥಾನದ ಚಿತ್ತೋರ್ಗಢದ ನಿವಾಸಿಯಾದ ಅರ್ಜುನ್ ದಮಾಮಿ ಎಂಬ ಯುವಕನಿಗೆ ಇತ್ತೀಚೆಗಷ್ಟೇ ನಿಶ್ಚಿತಾರ್ಥವಾಗಿತ್ತು. ಮದುವೆಯ ತಯಾರಿಗಳು ಜೋರಾಗಿ ನಡೆಯುತ್ತಿದ್ದವು. ಈ ನಡುವೆ, ತಮ್ಮ ಪ್ರಿ-ವೆಡ್ಡಿಂಗ್ ಫೋಟೋ ಶೂಟ್ಗಾಗಿ ಅರ್ಜುನ್, ತನ್ನ ನಿಶ್ಚಿತ ವಧು ಮತ್ತು ಆಕೆಯ ಚಿಕ್ಕಪ್ಪನೊಂದಿಗೆ ಪ್ರೇಕ್ಷಣೀಯ ಸ್ಥಳವಾದ ಗೋರಿ ಧಾಮ್ಗೆ ಭೇಟಿ ನೀಡಿದ್ದರು.
ಬೆಟ್ಟಗಳ ನಡುವೆ ಇರುವ ದೇವಾಲಯದ ಆವರಣದ ಬಳಿ ವಧುವಿನ ಚಿಕ್ಕಪ್ಪ ವಿಶ್ರಮಿಸುತ್ತಿದ್ದಾಗ, ಈ ಜೋಡಿ ಸುಂದರ ಚಿತ್ರಗಳನ್ನು ಕ್ಲಿಕ್ಕಿಸಿಕೊಳ್ಳಲು ಬೆಟ್ಟದ ಕೆಳಗಿನ ಸರೋವರದ ತೀರಕ್ಕೆ ತೆರಳಿದ್ದರು. ಸರೋವರದ ಸೌಂದರ್ಯಕ್ಕೆ ಮನಸೋತ ಅರ್ಜುನ್, ಫೋಟೋ ಶೂಟ್ ನಡುವೆಯೇ ಸ್ನಾನ ಮಾಡಲು ನೀರಿನ ಹತ್ತಿರ ತೆರಳಿದ್ದಾರೆ. ಆದರೆ, ಈ ವೇಳೆ ದುರದೃಷ್ಟವಶಾತ್ ಕಾಲು ಜಾರಿ ಸರೋವರದ ಆಳವಾದ ಕಂದಕದಂತಹ ನೀರಿಗೆ ಬಿದ್ದಿದ್ದಾರೆ.
ತನ್ನ ಕಣ್ಣೆದುರೇ ಭಾವಿ ಪತಿ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡ ಯುವತಿ ತೀವ್ರ ಆಘಾತಕ್ಕೊಳಗಾಗಿ, ಜೋರಾಗಿ ಕೂಗುತ್ತಾ ನೆರವಿಗಾಗಿ ಯತ್ನಿಸಿದ್ದಾರೆ. ಆಕೆಯ ಆಕ್ರಂದನ ಕೇಳಿ ಧಾವಿಸಿದ ಸ್ಥಳೀಯ ಪ್ರವಾಸಿಗರು ತಕ್ಷಣವೇ ಪೊಲೀಸರು ಮತ್ತು ರಕ್ಷಣಾ ಪಡೆಗಳಿಗೆ ಮಾಹಿತಿ ನೀಡಿದ್ದಾರೆ.
ಸವಾಲಾಗಿದ್ದ ರಕ್ಷಣಾ ಕಾರ್ಯಾಚರಣೆ: ಮಾಹಿತಿ ಸಿಗುತ್ತಿದ್ದಂತೆಯೇ ಸ್ಥಳೀಯ ಪೊಲೀಸರು ಮತ್ತು ಅಧಿಕಾರಿಗಳು ಧಾವಿಸಿ ಶೋಧ ಕಾರ್ಯ ಆರಂಭಿಸಿದರೂ, ಸರೋವರದ ಅತಿ ಆಳ ಮತ್ತು ಕತ್ತಲೆಯ ಕಾರಣದಿಂದಾಗಿ ಮಂಗಳವಾರದ ಕಾರ್ಯಾಚರಣೆಗೆ ಅಡ್ಡಿಯಾಯಿತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಉದಯಪುರದಿಂದ ರಾಜ್ಯ ವಿಪತ್ತು ನಿರ್ವಹಣಾ ಪಡೆಯ (SDRF) ವಿಶೇಷ ತಜ್ಞರ ತಂಡವನ್ನು ಕರೆಸಲಾಯಿತು.
ಮುಂಜಾನೆ, ಎಸ್ಡಿಆರ್ಎಫ್ ಮತ್ತು ರಾಜ್ಸಮಂದ್ ನಾಗರಿಕ ರಕ್ಷಣಾ ತಂಡಗಳು ಜಂಟಿಯಾಗಿ ಕಾರ್ಯಾಚರಣೆಯನ್ನು ಪುನರಾರಂಭಿಸಿದವು. ಬೆಟ್ಟದ ಕಡಿದಾದ ಮತ್ತು ದುರ್ಗಮ ಹಾದಿಯಾಗಿದ್ದರಿಂದ ಕಾರ್ಯಾಚರಣೆ ಅತ್ಯಂತ ಸವಾಲಿನದ್ದಾಗಿತ್ತು. ಕೊನೆಗೆ ಹಲವಾರು ಗಂಟೆಗಳ ಕಠಿಣ ಶ್ರಮದ ನಂತರ ಅರ್ಜುನ್ ಅವರ ಮೃತದೇಹವನ್ನು ನೀರಿನಿಂದ ಹೊರತೆಗೆಯಲಾಯಿತು.
ಈ ಕಷ್ಟದ ಸಮಯದಲ್ಲಿ ಸ್ಥಳೀಯ ಗ್ರಾಮಸ್ಥರು ಮತ್ತು ರಕ್ಷಣಾ ಪಡೆಗಳು ತೋರಿದ ಮಾನವೀಯತೆ ಶ್ಲಾಘನೀಯವಾಗಿತ್ತು. ಕಣಿವೆಯಂತಹ ಸರೋವರದ ಆಳದಿಂದ ಕಡಿದಾದ ಬೆಟ್ಟದ ತುದಿಯವರೆಗೆ ಅರ್ಜುನ್ ಅವರ ಮೃತದೇಹವನ್ನು ಹೊತ್ತು ತರಲು ಗ್ರಾಮಸ್ಥರು ಪೊಲೀಸರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸಿದರು. ಸದ್ಯ ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದ್ದು, ವಿವಾಹದ ಸಂಭ್ರಮದಲ್ಲಿದ್ದ ಇಡೀ ಕುಟುಂಬ ಆಘಾತದಲ್ಲಿ ಮುಳುಗಿದೆ.
ಇತ್ತೀಚಿನ ದಿನಗಳಲ್ಲಿ ಫೋಟೋ ಶೂಟ್ಗಳು ಹಾಗೂ ರೀಲ್ಸ್ಗಳ ನೆಪದಲ್ಲಿ ನಿಸರ್ಗದ ಆಕರ್ಷಣೆಗೆ ಒಳಗಾಗುವಾಗ ಸಾರ್ವಜನಿಕರು ಸುರಕ್ಷತೆಯನ್ನು ಸಂಪೂರ್ಣವಾಗಿ ಮರೆಯುತ್ತಿದ್ದಾರೆ. ಇಂತಹ ಪ್ರಕೃತಿ ರಮಣೀಯ ಹಾಗೂ ಅಪಾಯಕಾರಿ ಸ್ಥಳಗಳಿಗೆ ಭೇಟಿ ನೀಡಿದಾಗ ಎಚ್ಚರಿಕೆ ವಹಿಸದಿದ್ದರೆ ಎಂತಹ ಘೋರ ದುರಂತ ಸಂಭವಿಸಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಮದುವೆಯ ಮಂಟಪ ಏರಬೇಕಾಗಿದ್ದ ಯುವಕನ ಶವಯಾತ್ರೆ ನೋಡುವಂತಾದದ್ದು ವಿಧಿಯ ಕ್ರೂರ ವೈಪರೀತ್ಯ.