ಶಿವಮೊಗ್ಗ: ಜಿಲ್ಲೆಯ ಚೋರಡಿ ಸೇತುವೆ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸಿಗಂದೂರು ಚೌಡೇಶ್ವರಿ ದೇವಿ ದರ್ಶನಕ್ಕೆ ಹೊರಟಿದ್ದ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಆರು ಮಂದಿ ಗಾಯಗೊಂಡಿದ್ದಾರೆ.
ಘಟನೆಯ ವಿವರ:
ಬೆಂಗಳೂರಿನಿಂದ ಆರು ಮಂದಿ ಸ್ನೇಹಿತರು ಒಂದೇ ಕಾರಿನಲ್ಲಿ ಸಿಗಂದೂರು ದೇವಸ್ಥಾನದತ್ತ ಪ್ರಯಾಣಿಸುತ್ತಿದ್ದರು. ಶಿವಮೊಗ್ಗ ಸಮೀಪದ ಚೋರಡಿ ಬ್ರಿಡ್ಜ್ ಬಳಿ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಡಿವೈಡರ್ಗೆ ಭೀಕರವಾಗಿ ಡಿಕ್ಕಿ ಹೊಡೆದು, ರಸ್ತೆಯಲ್ಲೇ ಮೂರು ಬಾರಿ ಪಲ್ಟಿಯಾಗಿದೆ.
ಇಬ್ಬರ ಸ್ಥಿತಿ ಗಂಭೀರ:
ಅಪಘಾತದಲ್ಲಿ ಕಾರಿನಲ್ಲಿದ್ದ ಆರೂ ಮಂದಿಗೆ ಗಾಯಗಳಾಗಿದ್ದು, ಅವರ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕೂದಲೆಳೆ ಅಂತರದಲ್ಲಿ ತಪ್ಪಿದ ಪೊಲೀಸ್ ವಾಹನದ ದುರಂತ:
ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ಸಾಗರ ಪೇಟೆ ಠಾಣೆಯ ಪೊಲೀಸ್ ವಾಹನ ಸ್ಥಳಕ್ಕೆ ಆಗಮಿಸುತ್ತಿತ್ತು. ಕಾರು ಪಲ್ಟಿಯಾದ ವೇಳೆಯಲ್ಲೇ ಪೊಲೀಸ್ ವಾಹನ ಬಂದಿದ್ದರೆ ಮತ್ತಷ್ಟು ದೊಡ್ಡ ಮಟ್ಟದ ದುರಂತ ಸಂಭವಿಸುವ ಸಾಧ್ಯತೆಯಿತ್ತು. ಪ್ರಸ್ತುತ ಸಾಗರ ಪೇಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.