ಆನೇಕಲ್: ಶಾಲಾ ಶಿಕ್ಷಕಿಯೊಬ್ಬರು ಸಾರ್ವಜನಿಕವಾಗಿ ನಿಂದಿಸಿ, ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಮನನೊಂದ 8ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಡೆತ್ನೋಟ್ ಬರೆದಿಟ್ಟು ನೇಣಿಗೆ ಶರಣಾಗಿರುವ ಅತ್ಯಂತ ಕರುಣಾಜನಕ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಮರಸೂರು ಮಡಿವಾಳ ಗ್ರಾಮದಲ್ಲಿ ನಡೆದಿದೆ.
ಮರಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ಮಧುಶ್ರೀ ಎಂಬ ಬಾಲಕಿಯೇ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಬೆಳಗ್ಗೆ ಪೋಷಕರು ಗಮನಿಸಿದಾಗ ಮಗಳ ಆತ್ಮಹತ್ಯೆಯ ಕಟು ಸತ್ಯ ಬೆಳಕಿಗೆ ಬಂದಿದೆ. ಸಾವಿಗೂ ಮುನ್ನ ಬಾಲಕಿ ಬರೆದಿಟ್ಟಿರುವ ಮರಣ ಪತ್ರ (ಡೆತ್ನೋಟ್) ಲಭ್ಯವಾಗಿದ್ದು, ಅದರಲ್ಲಿ ಶಾಲೆಯಲ್ಲಿ ನಡೆದ ಘಟನೆಯನ್ನು ಅತ್ಯಂತ ಸವಿಸ್ತಾರವಾಗಿ ಉಲ್ಲೇಖಿಸಲಾಗಿದೆ. “ಶಾಲೆಯಲ್ಲಿ ನನ್ನ ಮೇಲೆ ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಹೊರಿಸಲಾಗಿದೆ. ಈ ಸಾರ್ವಜನಿಕ ಅವಮಾನವನ್ನು ಸಹಿಸಿಕೊಂಡು ಬದುಕಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಶಿಕ್ಷಕಿಯ ನಡೆ ಹಾಗೂ ಶಾಲೆಯ ಘಟನೆಯಿಂದ ನನ್ನ ಮನಸ್ಸಿಗೆ ಭಾರಿ ಆಘಾತವಾಗಿದ್ದರಿಂದಲೇ ನಾನು ಈ ತೀವ್ರ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ” ಎಂದು ಬಾಲಕಿ ಡೆತ್ನೋಟ್ನಲ್ಲಿ ತನ್ನ ಅಳಲು ತೋಡಿಕೊಂಡಿದ್ದಾಳೆ.
ಮರಣ ಪತ್ರದಲ್ಲಿ ತನ್ನ ಕುಟುಂಬದವರನ್ನು ನೆನೆದು ಬಾಲಕಿ ಭಾವುಕವಾಗಿ ಬರೆದಿದ್ದು, ಓದುಗರ ಕಣ್ಣಾಲಿಗಳು ಒದ್ದೆಯಾಗುವಂತಿವೆ. “ನನ್ನ ಸಾವಿಗೆ ಅಮ್ಮ, ಅಕ್ಕ, ತಂಗಿ ಇಲ್ಲವೇ ತಮ್ಮ ಯಾರು ಜವಾಬ್ದಾರರಲ್ಲ. ನನ್ನ ತಾಯಿಯನ್ನು ಯಾರೂ ದೂಷಿಸಬೇಡಿ. ಈ ಭೂಮಿಯ ಮೇಲೆ ಬದುಕಲು ನನಗೆ ಯಾವುದೇ ಅರ್ಹತೆ ಇಲ್ಲದಂತಾಗಿದೆ. ಅಮ್ಮ ಸೇರಿದಂತೆ ಕುಟುಂಬದ ಎಲ್ಲರೂ ನನ್ನನ್ನು ಕ್ಷಮಿಸಿಬಿಡಿ” ಎಂದು ಕೊನೆಯದಾಗಿ ಬರೆದು ಬಾಲಕಿ ಜೀವ ತೊರೆದಿದ್ದಾಳೆ.
ಒಂದು ಸಣ್ಣ ವಯಸ್ಸಿನ ಹೆಣ್ಣುಮಗಳು ಶಾಲೆಯ ವಾತಾವರಣದಲ್ಲಿ ಅನುಭವಿಸಿದ ಕಿರುಕುಳಕ್ಕೆ ಬಲಿಯಾಗಿರುವುದು ಇಡೀ ಗ್ರಾಮದಲ್ಲಿ ತೀವ್ರ ಆಕ್ರೋಶ ಹಾಗೂ ಶೋಕದ ವಾತಾವರಣ ಸೃಷ್ಟಿಸಿದೆ. ಈ ದಾರುಣ ಘಟನೆಗೆ ಸಂಬಂಧಿಸಿದಂತೆ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಡೆತ್ನೋಟ್ ವಶಕ್ಕೆ ಪಡೆದು ತನಿಖೆಯನ್ನು ಕೈಗೊಂಡಿದ್ದಾರೆ. ಕಿರುಕುಳ ನೀಡಿದ ಆರೋಪಿ ಶಿಕ್ಷಕಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.