ಚಿಕ್ಕಮಗಳೂರು: ನಗರದಲ್ಲಿ ಮನುಕುಲವೇ ತಲೆತಗ್ಗಿಸುವಂತಹ ಅತ್ಯಂತ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದ್ದು, ನಿರ್ಜನ ಪ್ರದೇಶದ ಪೊದೆಯೊಂದರಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಎಸೆಯಲಾಗಿದ್ದ ನವಜಾತ ಗಂಡು ಶಿಶುವಿನ ಮೃತದೇಹ ಪತ್ತೆಯಾಗಿದೆ.
ಇಲ್ಲಿನ ಸರ್ಕಾರಿ ಬಸ್ ಡಿಪೋ ಸಮೀಪದ ರಸ್ತೆ ಬದಿಯ ಪೊದೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಕೇವಲ ಒಂದು ದಿನದ ಮಗುವನ್ನು ಈ ರೀತಿ ಕಸದಂತೆ ಎಸೆದು ಹೋಗಿರುವ ಕೃತ್ಯಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ರಸ್ತೆ ಬದಿಯ ಪೊದೆಯಲ್ಲಿ ಅನುಮಾನಾಸ್ಪದವಾಗಿ ಬಿದ್ದಿದ್ದ ಪ್ಲಾಸ್ಟಿಕ್ ಚೀಲವನ್ನು ಗಮನಿಸಿದ ಸ್ಥಳೀಯರು, ಹತ್ತಿರ ಹೋಗಿ ಬಿಚ್ಚಿ ನೋಡಿದಾಗ ಮಗುವಿನ ಮೃತದೇಹ ಇರುವುದು ಕಂಡುಬಂದು ದಿಗ್ಭ್ರಮೆಗೊಂಡಿದ್ದಾರೆ. ಮಗು ಜನಿಸಿದ ಬಳಿಕ ಹೆತ್ತವರೇ ಈ ರೀತಿ ಚೀಲದಲ್ಲಿ ತುಂಬಿ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ.
ವಿಶೇಷವೆಂದರೆ, ಮಗುವಿನ ಹೊಕ್ಕಳು ಬಳ್ಳಿಗೆ ಹೆರಿಗೆ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ಹಾಕಲಾಗುವ ವೈದ್ಯಕೀಯ ಪ್ಲಾಸ್ಟಿಕ್ ಕ್ಲಿಪ್ ಹಾಗೆಯೇ ಇರುವುದು ಕಂಡುಬಂದಿದೆ. ಹೀಗಾಗಿ ಮಗು ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಯಲ್ಲೇ ಜನಿಸಿರುವುದು ಖಾತರಿಯಾಗಿದೆ. ಸದ್ಯ ಪೊಲೀಸರ ಕೈ ಸೇರಿರುವ ಈ ವೈದ್ಯಕೀಯ ಕ್ಲಿಪ್ ತನಿಖೆಗೆ ಪ್ರಮುಖ ಸುಳಿವಗಿದ್ದು, ಇದರ ಆಧಾರದ ಮೇಲೆ ಸುತ್ತಮುತ್ತಲಿನ ಆಸ್ಪತ್ರೆಗಳ ದಾಖಲೆಗಳನ್ನು ಪರಿಶೀಲಿಸಲು ಪೊಲೀಸರು ಮುಂದಾಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಚಿಕ್ಕಮಗಳೂರು ನಗರ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮಗುವಿನ ಮೃತದೇಹವನ್ನು ವಶಕ್ಕೆ ಪಡೆದು, ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಗುವನ್ನು ತಂದು ಎಸೆದ ಪಾಪಿಗಳ ಪತ್ತೆಗಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.