ನವದೆಹಲಿ: ದೇಶದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ NEET-UG ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಅಕ್ರಮಗಳನ್ನು ಖಂಡಿಸಿ ಭಾರತದ ಅತಿದೊಡ್ಡ ‘ಜೆನ್ ಝಿ’ (Gen Z) ಯುವ ಸಮೂಹದ ಪ್ರತಿಭಟನೆ ರಾಜಧಾನಿಯಲ್ಲಿ ಭುಗಿಲೆದ್ದಿದೆ. ಅಮೆರಿಕಾದಿಂದ ಭಾರತಕ್ಕೆ ಬಂದಿಳಿದಿರುವ ಇಂಟರ್ನೆಟ್ ಸೆನ್ಸೇಷನ್, ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಸಂಸ್ಥಾಪಕ ಅಭಿಜಿತ್ ಧೀಪ್ಕೇ ನೇತೃತ್ವದಲ್ಲಿ ದೆಹಲಿಯ ಜಂತರ್ ಮಂತರ್ನಲ್ಲಿ ಬೃಹತ್ ಧರಣಿ ಆರಂಭವಾಗಿದೆ.
ಕೇವಲ ಆನ್ಲೈನ್ ಮೀಮ್ ಆಗಿ ಆರಂಭಗೊಂಡು, ಈಗ ಬೃಹತ್ ರಾಜಕೀಯ ಆಂದೋಲನವಾಗಿ ರೂಪಾಂತರಗೊಂಡಿರುವ ಕಾಕ್ರೋಚ್ ಜನತಾ ಪಾರ್ಟಿ (CJP) ನೀಡಿದ ಪ್ರತಿಭಟನಾ ಕರೆಗೆ ದೇಶಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಯುವಕರು ಹಾಗೂ ಪೋಷಕರು ಸೇರಿದಂತೆ ನೂರಾರು ಮಂದಿ ಜಂತರ್ ಮಂತರ್ನಲ್ಲಿ ಜಮಾಯಿಸಿದ್ದು, ನೀಟ್ ಪರೀಕ್ಷಾ ಅಕ್ರಮದ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಕ್ಷಣವೇ ರಾಜೀನಾಮೆ ನೀಡಬೇಕೆಂದು ಆಕ್ರೋಶದ ಘೋಷಣೆಗಳನ್ನು ಕೂಗುತ್ತಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ವಿಡಂಬನಾತ್ಮಕವಾಗಿ ಆರಂಭವಾದ ಕಾಕ್ರೋಚ್ ಜನತಾ ಪಾರ್ಟಿ (CJP), ಕೇವಲ ನಾಲ್ಕೇ ದಿನಗಳಲ್ಲಿ ಇನ್ಸ್ಟಾಗ್ರಾಮ್ನಲ್ಲಿ ಬರೋಬ್ಬರಿ 12 ಮಿಲಿಯನ್ (1.2 ಕೋಟಿ) ಫಾಲೋವರ್ಸ್ ಹೊಂದುವ ಮೂಲಕ ಇತಿಹಾಸ ಸೃಷ್ಟಿಸಿತ್ತು. ಈ ಮೂಲಕ ಆಡಳಿತಾರೂಢ ಬಿಜೆಪಿಯ ಇನ್ಸ್ಟಾಗ್ರಾಮ್ ಫಾಲೋವರ್ಸ್ (8.7 ಮಿಲಿಯನ್) ಸಂಖ್ಯೆಯನ್ನು ಹಿಂದಿಕ್ಕಿ ಇಡೀ ದೇಶದ ಗಮನ ಸೆಳೆದಿತ್ತು. ತದನಂತರ ಈ ಅಕೌಂಟ್ ಆನ್ಲೈನ್ನಿಂದ ನಾಪತ್ತೆಯಾಗಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ಮೂಲತಃ ಉತ್ತರ ಪ್ರದೇಶದವರಾಗಿದ್ದು, ಪ್ರಸ್ತುತ ಅಮೆರಿಕಾದಲ್ಲಿ ನೆಲೆಸಿರುವ ಅಭಿಜೀತ್ ದೀಪ್ಕೆ ಸ್ಥಾಪಿಸಿದ ಈ ಪಕ್ಷವು, “ಸೋಮಾರಿಗಳು ಮತ್ತು ನಿರುದ್ಯೋಗಿಗಳ ಧ್ವನಿ” ಎಂದು ತನ್ನನ್ನು ತಾನು ಕರೆದುಕೊಳ್ಳುತ್ತದೆ. ಇಂಟರ್ನೆಟ್ ಕ್ರಿಯೇಟರ್ಸ್ ಹಾಗೂ ಜೆನ್ ಝಿ ಯುವಕರ ಅಚ್ಚುಮೆಚ್ಚಿನ ಸಂಘಟನೆಯಾಗಿರುವ ಸಿಜೆಪಿ ಬೆಂಬಲಾರ್ಥವಾಗಿ ಸೋಷಿಯಲ್ ಮೀಡಿಯಾಗಳು ಈಗ ಜಿರಳೆ (Cockroach) ಎಮೋಜಿಗಳಿಂದ ತುಂಬಿಹೋಗಿವೆ.
ಈ ಯುವ ಆಂದೋಲನಕ್ಕೆ ದೇಶದ ಪ್ರಮುಖ ವಿರೋಧ ಪಕ್ಷಗಳ ನಾಯಕರು ಬಹಿರಂಗ ಬೆಂಬಲ ಘೋಷಿಸಿದ್ದಾರೆ:
ಮನೀಶ್ ಸಿಸೋಡಿಯಾ (AAP): “ನಾನು ಕೂಡ ಜಿರಳೆಯೇ. ಮೊಸಳೆ ಮತ್ತು ಜಿರಳೆಗಳ ನಡುವೆ ಯುದ್ಧವಾದಾಗ, ನಾನು ಹೆಮ್ಮೆಯಿಂದ ಜಿರಳೆ ಜನತಾ ಪಕ್ಷದ ಜೊತೆ ನಿಲ್ಲುತ್ತೇನೆ” ಎಂದು ಇನ್ಸ್ಟಾಗ್ರಾಮ್ ವಿಡಿಯೋ ಮೂಲಕ ಸಿಜೆಪಿಯನ್ನು ಬೆಂಬಲಿಸಿದ್ದಾರೆ.
ಅಖಿಲೇಶ್ ಯಾದವ್ (SP): “ಬಿಜೆಪಿ ವರ್ಸಸ್ ಸಿಜೆಪಿ” ಎಂದು ಬರೆಯುವ ಮೂಲಕ ಎಕ್ಸ್ (ಟ್ವಿಟರ್) ಹಾಗೂ ಇನ್ಸ್ಟಾಗ್ರಾಮ್ನಲ್ಲಿ ಆಂದೋಲನಕ್ಕೆ ಧುಮುಕಿದ್ದಾರೆ.
ಮಹುವಾ ಮೊಯಿತ್ರಾ ಮತ್ತು ಕೀರ್ತಿ ಆಜಾದ್ (TMC): ತೃಣಮೂಲ ಕಾಂಗ್ರೆಸ್ ನಾಯಕರು ಬಹಿರಂಗವಾಗಿಯೇ ಸಿಜೆಪಿ ಸೇರಲು ಇಚ್ಛಿಸಿದ್ದು, ಕೀರ್ತಿ ಆಜಾದ್ ಅವರು “ನಾನು ಜಿರಳೆ ಜನತಾ ಪಾರ್ಟಿಗೆ ಸೇರಲು ಬಯಸುತ್ತೇನೆ, ಇದಕ್ಕೆ ಅಗತ್ಯವಿರುವ ಅರ್ಹತೆಗಳೇನು?” ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇತ್ತ ಸಿಜೆಪಿ ಅಬ್ಬರಕ್ಕೆ ಪ್ರತಿಯಾಗಿ ಇಂಟರ್ನೆಟ್ನಲ್ಲಿ ಡಿಜಿಟಲ್ ವಾರ್ ಆರಂಭಿಸಿರುವ ಬಿಜೆಪಿ ಬೆಂಬಲಿಗರು, ಜಿರಳೆಗಳನ್ನು ನಿಯಂತ್ರಿಸುವ ‘ಲಕ್ಷ್ಮಣ್ ರೇಖಾ’ ಮತ್ತು ‘ಹಿಟ್’ (HIT) ಸಿಂಬಲ್ಗಳನ್ನು ಬಳಸಿಕೊಂಡು ಟ್ರೋಲ್ ಮಾಡುವ ಮೂಲಕ ಆನ್ಲೈನ್ನಲ್ಲಿ ಕೌಂಟರ್ ಅಟ್ಯಾಕ್ ನಡೆಸುತ್ತಿದ್ದಾರೆ.
ಒಟ್ಟಾರೆಯಾಗಿ, ಕೇವಲ ಸೋಷಿಯಲ್ ಮೀಡಿಯಾ ಮೀಮ್ ಆಗಿದ್ದ ಕಾಕ್ರೋಚ್ ಜನತಾ ಪಾರ್ಟಿ, ಇಂದು ದೇಶದ ಶೈಕ್ಷಣಿಕ ವ್ಯವಸ್ಥೆಯ ಅಕ್ರಮಗಳ ವಿರುದ್ಧ ವಿದ್ಯಾರ್ಥಿಗಳನ್ನು ಸಂಘಟಿಸಿ ಬೀದಿಗಿಳಿಸುವ ಮಟ್ಟಿಗೆ ಬೆಳೆದು ನಿಂತಿರುವುದು ಭಾರತೀಯ ರಾಜಕಾರಣದಲ್ಲಿ ಹೊಸ ಪರ್ವಕ್ಕೆ ಮುನ್ನುಡಿ ಬರೆದಿದೆ.
ವಿಶೇಷ ಲೇಖನ
ಪರಶಿವ ಧನಗೂರು (ಉದಯ ಟಿವಿ ಶಿವು)
