ಕಲಬುರಗಿ : ದೇಶದ ಸ್ವಾತಂತ್ರ್ಯೋತ್ಸವದ ಮಾದರಿಯಲ್ಲಿಯೇ ‘ಕಲ್ಯಾಣ ಕರ್ನಾಟಕ ಉತ್ಸವ’ವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಬೇಕು. ಮುಖ್ಯಮಂತ್ರಿಗಳು ಕೇವಲ ಕಾಟಾಚಾರಕ್ಕಾಗಿ ಕಲಬುರಗಿಗೆ ಆಗಮಿಸಿ ಧ್ವಜಾರೋಹಣ ನಡೆಸದೆ, ಈ ಭಾಗದ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ಹಾಗೂ ವಿಶೇಷ ಸೌಲಭ್ಯಗಳನ್ನು ಘೋಷಣೆ ಮಾಡಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಸುರೇಶ ಬಡಿಗೇರ ಒತ್ತಾಯಪಡಿಸಿದರು.
ನಗರದ ಸರ್ವಜ್ಞ ಕಾಲೇಜಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಹಾಗೂ ಜೈ ಕರವೇ ಸಹಯೋಗದಲ್ಲಿ ಆಯೋಜಿಸಲಾಗಿದ್ದ “ಕಲ್ಯಾಣ ಕರ್ನಾಟಕ ವಿಮೋಚನೆಯ ಮಹತ್ವ” ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಘಟನೆಗಳ ಪ್ರಮುಖ ಬೇಡಿಕೆಗಳು:
ವಿಶೇಷ ಸೌಲಭ್ಯ ಘೋಷಣೆ: ಉತ್ಸವದ ಸಂದರ್ಭದಲ್ಲಿ ಈ ಭಾಗಕ್ಕೆ ಹೆಚ್ಚಿನ ಅನುದಾನ ಹಾಗೂ ಮೂಲಸೌಕರ್ಯ ಸೌಲಭ್ಯಗಳನ್ನು ಸರ್ಕಾರ ಪ್ರಕಟಿಸಬೇಕು.
ಸಮಿತಿ ಪುನಾರಚನೆ: ಪ್ರಸ್ತುತ ಚಾಲ್ತಿಯಲ್ಲಿರುವ ಕಲ್ಯಾಣ ಕರ್ನಾಟಕ ಉತ್ಸವ ಸಮಿತಿಯನ್ನು ತಕ್ಷಣವೇ ರದ್ದುಪಡಿಸಿ, ಅದರ ಜವಾಬ್ದಾರಿಯನ್ನು ಕನ್ನಡಪರ ಸಂಘಟನೆಯ ಮುಖಂಡರಿಗೆ ವಹಿಸಬೇಕು ಎಂದು ಕರವೇ ಜಿಲ್ಲಾಧ್ಯಕ್ಷ ಮಂಜುನಾಥ ನಾಲವಾರಕರ್ ಪ್ರಸ್ತಾವಿಕವಾಗಿ ಆಗ್ರಹಿಸಿದರು.
ಪ್ರಮುಖ ನಾಯಕರ ಛಾಯಾಚಿತ್ರ ಡ್ಡಾಯ: ಉತ್ಸವದ ಕಾರ್ಯಕ್ರಮಗಳಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜೊತೆಗೆ ಜಗಜ್ಯೋತಿ ಬಸವಣ್ಣ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಕಡ್ಡಾಯವಾಗಿ ಬಳಸಬೇಕು.
ಕಾರ್ಯಕ್ರಮದ ವಿವರ:
ಈ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಎಸಿಪಿ ಶರಣಬಸಪ್ಪ ಎಸ್. ಸುಬೇದಾರ್ ಅವರು ಉದ್ಘಾಟಿಸಿದರು. ವೇದಿಕೆಯಲ್ಲಿ ಸರ್ವಜ್ಞ ಕಾಲೇಜಿನ ಪ್ರಾಚಾರ್ಯ ಪ್ರಶಾಂತ್ ಕುಲಕರ್ಣಿ, ಕನ್ನಡಪರ ಹೋರಾಟಗಾರರಾದ ಶರಣು ಹೊಸಮನಿ, ಆನಂದ ತೆಗನೂರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಸಂಸ್ಕೃತಿ ಪ್ರಾರ್ಥನೆ ಗೀತೆ ಗಾಯನ ನಡೆಸಿಕೊಟ್ಟರೆ, ಡಾ. ವಿದ್ಯಾವತಿ ಮೂಲಗೆ ಕಾರ್ಯಕ್ರಮವನ್ನು ನಿರೂಪಿಸಿದರು.