ಬೆಂಗಳೂರು: ರಾಜಧಾನಿಯ ಕನಕಪುರ ರಸ್ತೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ತಮ್ಮ ಎದುರು ಅತ್ಯಂತ ಅಸಭ್ಯವಾಗಿ ಹಾಗೂ ವಿಕೃತಿಯಿಂದ ವರ್ತಿಸಿದ್ದಾನೆ ಎಂದು ಮಾಜಿ ಬಿಗ್ ಬಾಸ್ ಸ್ಪರ್ಧಿ, ಸ್ಯಾಂಡಲ್ವುಡ್ ನಟಿ ದಿವ್ಯಾ ಸುರೇಶ್ ತೀವ್ರ ಅಸಮಾಧಾನ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮಗಾದ ಕಹಿ ಅನುಭವದ ವೀಡಿಯೋವನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ನಟಿ ದಿವ್ಯಾ ಸುರೇಶ್ ಅವರು ತಮ್ಮ ಸಹೋದರಿಯ ಜೊತೆಗೂಡಿ ಕಾರಿನಲ್ಲಿ ಹೊರಟಿದ್ದ ಸಂದರ್ಭದಲ್ಲಿ ಈ ಆಘಾತಕಾರಿ ಘಟನೆ ಸಂಭವಿಸಿದೆ.
”ನಾನು ಮತ್ತು ನನ್ನ ಸಹೋದರಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ಅನಾಮಿಕ ವ್ಯಕ್ತಿಯೊಬ್ಬ ನಮ್ಮನ್ನು ಸತತವಾಗಿ ಹಿಂಬಾಲಿಸಿಕೊಂಡು ಬಂದಿದ್ದಾನೆ. ಅಷ್ಟೇ ಅಲ್ಲದೆ, ನಮ್ಮ ಕಾರಿನ ಬಳಿ ಬಂದು ಅತ್ಯಂತ ಅಸಭ್ಯವಾಗಿ ನಡೆದುಕೊಂಡಿದ್ದಾನೆ ಹಾಗೂ ವಿಕೃತಿ ಪ್ರದರ್ಶಿಸಿದ್ದಾನೆ” ಎಂದು ದಿವ್ಯಾ ಸುರೇಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ರಸ್ತೆಯಲ್ಲಿ ತಮಗೆ ಕಿರುಕುಳ ನೀಡಿದ ಹಾಗೂ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯ ಕೃತ್ಯವನ್ನು ನಟಿ ದಿವ್ಯಾ ಸುರೇಶ್ ಅವರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ. ಸಾರ್ವಜನಿಕ ಇಂಟರ್ನೆಟ್ ವೇದಿಕೆಯಲ್ಲಿ ಆ ವೀಡಿಯೋವನ್ನು ಹಂಚಿಕೊಳ್ಳುವ ಮೂಲಕ, ಮಹಿಳೆಯರಿಗೆ ರಸ್ತೆಯಲ್ಲಿ ಎದುರಾಗುತ್ತಿರುವ ಇಂತಹ ವಿಕೃತ ಮನಸ್ಸುಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಈ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಮಹಿಳೆಯರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ನಗರದ ಜನನಿಬಿಡ ರಸ್ತೆಯಲ್ಲೇ ನಟಿಯೊಬ್ಬರಿಗೆ ಇಂತಹ ಪರಿಸ್ಥಿತಿ ಎದುರಾಗಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಇಂತಹ ವಿಕೃತಕಾಮಿಗಳ ವಿರುದ್ಧ ಪೊಲೀಸರು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.