ಜಮಖಂಡಿ / ಬಾಗಲಕೋಟೆ: ಸರ್ಕಾರಿ ಸೇವೆಯಿಂದ ನಿವೃತ್ತರಾದ ನೌಕರರೊಬ್ಬರಿಗೆ ಬರಬೇಕಿದ್ದ ಹಣವನ್ನು ಬಿಡುಗಡೆ ಮಾಡಲು ಶೇ. 50 ರಷ್ಟು ಕಮಿಷನ್ ಕೇಳಿ, ಲಂಚ ಸ್ವೀಕರಿಸುತ್ತಿದ್ದ ಇಬ್ಬರು ಸರ್ಕಾರಿ ಅಧಿಕಾರಿಗಳು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ತಾಲೂಕು ಖಜಾನೆ ಅಧಿಕಾರಿ ಎಸ್. ಎಸ್ ಬಿರಾದಾರ್ ಹಾಗೂ ಪ್ರಥಮ ದರ್ಜೆ ಸಹಾಯಕ (FDA) ವಿನಾಯಕ್ ಹೊನವಾಡ ಬಂಧಿತ ಅಧಿಕಾರಿಗಳು.
ನಿವೃತ್ತ ನೌಕರರೊಬ್ಬರಿಗೆ ಸರ್ಕಾರದಿಂದ ಬರಬೇಕಿದ್ದ 1,42,900 ರೂ. ಹಣವನ್ನು ಬಿಡುಗಡೆ ಮಾಡಲು ಈ ಅಧಿಕಾರಿಗಳು ಕಮಿಷನ್ ಬೇಡಿಕೆ ಇಟ್ಟಿದ್ದರು. ಬರಬೇಕಿದ್ದ ಮೊತ್ತದಲ್ಲಿ ಸುಮಾರು ಶೇಕಡಾ 50 ರಷ್ಟು, ಅಂದರೆ 70,000 ರೂ. ಲಂಚ ನೀಡುವಂತೆ ಪಟ್ಟು ಹಿಡಿದಿದ್ದರು. ಕೊನೆಗೆ ದೂರುದಾರರು ಚೌಕಾಸಿ ನಡೆಸಿದ ಬಳಿಕ 40,000 ರೂ. ಲಂಚ ಪಡೆಯಲು ಅಧಿಕಾರಿಗಳು ಒಪ್ಪಿಕೊಂಡಿದ್ದರು.
ಖಜಾನೆ ಕಚೇರಿಯಲ್ಲಿ ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ DySP ಸುರೇಶ್ ರೆಡ್ಡಿ ಅವರ ನೇತೃತ್ವದ ತಂಡ ದಾಳಿ ನಡೆಸಿ, ಇಬ್ಬರೂ ಆರೋಪಿಗಳನ್ನು ಹಣದ ಸಮೇತ ರೆಡ್ಹ್ಯಾಂಡ್ ಆಗಿ ವಶಕ್ಕೆ ಪಡೆದುಕೊಂಡಿದೆ.
ನಿವೃತ್ತಿಯ ನಂತರ ಜೀವನ ನಿರ್ವಹಣೆಗೆ ಸಿಗುವ ಅಲ್ಪ ಮೊತ್ತದಲ್ಲೂ ಅರ್ಧದಷ್ಟು ಲಂಚ ಕೇಳಿದ ಅಧಿಕಾರಿಗಳ ಈ ನೀಚ ಕೃತ್ಯಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.