ಬ್ಯಾಡಗಿ: ಪಟ್ಟಣದ ವೈಭವಲಕ್ಷ್ಮಿ ಬಡಾವಣೆ ಹಾಗೂ ಛತ್ರ ರಸ್ತೆಯ ಸಮೀಪ ಅಪರಿಚಿತ ವ್ಯಕ್ತಿಗಳಿಬ್ಬರು ಮಕ್ಕಳಿಗೆ ಚಾಕೊಲೇಟ್ ಹಾಗೂ ಚಿಪ್ಸ್ ನೀಡುವ ಆಮಿಷ ಒಡ್ಡಿ ಮಾತಿಗೆಳೆಯಲು ಯತ್ನಿಸಿದ ಘಟನೆ ವರದಿಯಾಗಿದ್ದು, ಸಾರ್ವಜನಿಕರು ಹಾಗೂ ಪೋಷಕರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.
ಇತ್ತೀಚೆಗೆ ನಾಡಿನಾದ್ಯಂತ ಮಕ್ಕಳ ಅಪಹರಣ ಪ್ರಕರಣಗಳ ಕುರಿತು ವದಂತಿ ಹಾಗೂ ಘಟನೆಗಳು ವರದಿಯಾಗುತ್ತಿರುವ ಬೆನ್ನಲ್ಲೇ, ಬ್ಯಾಡಗಿಯಲ್ಲಿ ಈ ಘಟನೆ ಸಂಭವಿಸಿದೆ. ರಸ್ತೆಯಲ್ಲಿ ಆಟವಾಡುತ್ತಿದ್ದ ಹಾಗೂ ಓಡಾಡುತ್ತಿದ್ದ ಮಕ್ಕಳಿಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ಚಾಕೊಲೇಟ್ ಮತ್ತು ಚಿಪ್ಸ್ ನೀಡಿ ಸೆಳೆಯಲು ಯತ್ನಿಸಿದ್ದಾರೆ. ಅಪರಿಚಿತರ ನಡವಳಿಕೆಯಿಂದ ಭೀತಿಗೊಂಡ ಮಕ್ಕಳು ತಕ್ಷಣವೇ ಪ್ರಾಣಾಪಾಯದಿಂದ ಪಾರಾಗಲು ಮನೆಗಳತ್ತ ಓಡಿ ಹೋಗಿದ್ದಾರೆ.
ಅಪರಿಚಿತರು ಮಕ್ಕಳಿಗೆ ಆಮಿಷ ಒಡ್ಡುತ್ತಿರುವ ದೃಶ್ಯಗಳು ಸಮೀಪದ ಸಿಸಿಟಿವಿ ಕೆಮರಾದಲ್ಲಿ ಸೆರೆಯಾಗಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೀಡಿಯೋ ಬಹಿರಂಗಗೊಳ್ಳುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಹಾಗೂ ಪೋಷಕರು ಮಕ್ಕಳ ಸುರಕ್ಷತೆ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಪೋಷಕರು ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಅಪರಿಚಿತರೊಂದಿಗೆ ಮಾತನಾಡದಂತೆ, ಅವರಿಂದ ಯಾವುದೇ ಆಹಾರ ಪದಾರ್ಥ, ಚಾಕೊಲೇಟ್ ಅಥವಾ ಉಡುಗೊರೆಗಳನ್ನು ಸ್ವೀಕರಿಸದಂತೆ ಮಕ್ಕಳಿಗೆ ಅರಿವು ಮೂಡಿಸಬೇಕು ಎಂದು ಮನವಿ ಮಾಡಲಾಗಿದೆ.
ಈ ಕುರಿತು ಪೊಲೀಸ್ ಇಲಾಖೆಯು ತಕ್ಷಣವೇ ಸೂಕ್ತ ತನಿಖೆ ನಡೆಸಿ, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಳನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಮಕ್ಕಳ ನೆರವಿಗಾಗಿ ಮಕ್ಕಳ ಸಹಾಯವಾಣಿ: 1098