Police Roundup

ಸಾಲಗಾರರ ಕಿರುಕುಳಕ್ಕೆ ವ್ಯಕ್ತಿ ಆತ್ಮಹತ್ಯೆ: ದಂಪತಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ₹4 ಲಕ್ಷ ದಂಡ!

Share News

ಭದ್ರಾವತಿ: ಮಗಳ ಮದುವೆಗಾಗಿ ಪಡೆದ ಕೈಸಾಲ ತೀರಿಸಲಾಗದೆ, ಸಾಲಗಾರರ ಮಾನಸಿಕ ಹಿಂಸೆಯಿಂದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿಯ ನ್ಯಾಯಾಲಯವು ಐತಿಹಾಸಿಕ ತೀರ್ಪು ನೀಡಿದೆ. ಆರೋಪಿಗಳಾದ ದಂಪತಿಗೆ 10 ವರ್ಷಗಳ ಕಠಿಣ ಕಾರಾಗೃಹವಾಸ ಹಾಗೂ ತಲಾ 2 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ.

 

ಭದ್ರಾವತಿ ತಾಲೂಕಿನ ಬಂಡಾರಹಳ್ಳಿ ಗ್ರಾಮದ ಮಹದೇವ (56) ಮತ್ತು ಯಶೋದ (48) ಎಂಬುವವರಿಂದ ರಾಮಚಂದ್ರ ಅವರು ಸುಮಾರು 10 ವರ್ಷಗಳ ಹಿಂದೆ ತಮ್ಮ ಮಗಳ ಮದುವೆಗಾಗಿ ಕೈಸಾಲ ಪಡೆದಿದ್ದರು. ಸಾಲದ ಹಣವನ್ನು ಮರಳಿ ನೀಡಲು ಹೋದಾಗ, ಆರೋಪಿ ದಂಪತಿಗಳು ಹೆಚ್ಚಿನ ಬಡ್ಡಿ ನೀಡುವಂತೆ ಒತ್ತಾಯಿಸಿದ್ದರು. ಅಲ್ಲದೆ, ಹಣ ನೀಡದಿದ್ದರೆ ಬಂಡಾರಹಳ್ಳಿಯಲ್ಲಿರುವ ಮನೆಯನ್ನು ತಮ್ಮ ಹೆಸರಿಗೆ ಬರೆದುಕೊಡುವಂತೆ ಬೆದರಿಕೆ ಹಾಕಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾನಸಿಕ ಹಿಂಸೆ ನೀಡಿದ್ದರು ಎನ್ನಲಾಗಿದೆ.

 

ಸಾಲಗಾರರ ನಿರಂತರ ಕಿರುಕುಳದಿಂದ ಬೇಸತ್ತ ರಾಮಚಂದ್ರ ಅವರು 06-02-2021 ರಂದು ಭದ್ರಾವತಿಯ ಬಿ.ಹೆಚ್. ರಸ್ತೆಯಲ್ಲಿರುವ ರಘು ಲಾಡ್ಜ್‌ನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಕುರಿತು ಭದ್ರಾವತಿ ಹಳೇನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 306 (ಆತ್ಮಹತ್ಯೆಗೆ ಪ್ರಚೋದನೆ) ಸೇರಿದಂತೆ ವಿವಿಧ ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

 

ಪ್ರಕರಣದ ತನಿಖೆ ನಡೆಸಿದ ಪಿಎಸ್‌ಐ ಈರೇಶ ಅವರು ದೋಷಾರೋಪಣ ಪತ್ರ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಅಭಿಯೋಜಕಿ ರತ್ನಮ್ಮ ಪಿ. ಅವರು ಮಂಡಿಸಿದ ವಾದವನ್ನು ಪುರಸ್ಕರಿಸಿದ ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಅವರು ಏಪ್ರಿಲ್ 09, 2026 ರಂದು ಈ ತೀರ್ಪು ನೀಡಿದ್ದಾರೆ.

 

ಶಿಕ್ಷೆಯ ವಿವರ:

​ಇಬ್ಬರೂ ಆರೋಪಿಗಳಿಗೆ ತಲಾ 10 ವರ್ಷ ಕಠಿಣ ಸಜೆ.

​ತಲಾ 2 ಲಕ್ಷ ರೂ. ದಂಡ (ಒಟ್ಟು 4 ಲಕ್ಷ ರೂ.).

​ದಂಡದ ಮೊತ್ತದಲ್ಲಿ ಮೃತ ರಾಮಚಂದ್ರ ಅವರ ಪತ್ನಿಗೆ 1 ಲಕ್ಷ ರೂ. ಪರಿಹಾರ ನೀಡಲು ಆದೇಶ.

​ಕಿರುಕುಳ ನೀಡುವ ಸಾಲಗಾರರಿಗೆ ಈ ತೀರ್ಪು ಒಂದು ಎಚ್ಚರಿಕೆಯ ಗಂಟೆಯಾಗಿದೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin