ಹೈದರಾಬಾದ್: ಪತ್ನಿಯ ದ್ರೋಹ ಹಾಗೂ ಆಕೆಯ ಖಾಸಗಿ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಘಟನೆಯಿಂದ ಮನನೊಂದ ಸಾಫ್ಟ್ವೇರ್ ಇಂಜಿನಿಯರ್ ಸೀತಾರಾಂ ಎಂಬುವವರು ಕೆರೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಸಾಯುವ ಮುನ್ನ ಬರೆದಿಟ್ಟಿರುವ 19 ಪುಟಗಳ ಡೆತ್ ನೋಟ್ ಈಗ ದಾಂಪತ್ಯ ದ್ರೋಹದ ಭೀಕರ ಸತ್ಯಗಳನ್ನು ಹೊರಹಾಕಿದೆ.
ಸೀತಾರಾಂ ಮತ್ತು ರೇಣುಕಾ 2018ರಲ್ಲಿ ವಿವಾಹವಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಸುಂದರವಾಗಿದ್ದ ಸಂಸಾರದಲ್ಲಿ ಬಿರುಗಾಳಿ ಎದ್ದಿದ್ದು ಕಳೆದ ಒಂದೂವರೆ ವರ್ಷದಲ್ಲಿ. ತನಿಖೆಯ ಪ್ರಕಾರ, ರೇಣುಕಾ ಪತಿಗೆ ತಿಳಿಯದಂತೆ ಮೂವರು ಬೇರೆ ಬೇರೆ ವ್ಯಕ್ತಿಗಳೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ.
ರೇಣುಕಾ ತನ್ನ ಪ್ರಿಯಕರನೊಂದಿಗೆ ಇದ್ದ ಖಾಸಗಿ ವಿಡಿಯೋಗಳನ್ನು ಆಕೆಯ ಪ್ರಿಯಕರ ರಮಣ ಎಂಬಾತ ಇನ್ಸ್ಟಾಗ್ರಾಮ್ನಲ್ಲಿ ಹರಿಬಿಟ್ಟಿದ್ದ. ಈ ವಿಡಿಯೋಗಳು ಸೀತಾರಾಂ ಅವರ ಗಮನಕ್ಕೆ ಬಂದಾಗ ಅವರು ತೀವ್ರ ಆಘಾತಕ್ಕೊಳಗಾಗಿದ್ದರು. ಸಮಾಜದಲ್ಲಿ ಗೌರವದಿಂದ ಬದುಕುತ್ತಿದ್ದ ಅವರಿಗೆ ಈ ಘಟನೆ ನುಂಗಲಾರದ ತುತ್ತಾಗಿತ್ತು.
ಸಾಯುವ ಮುನ್ನ ಸೀತಾರಾಂ ಬರೆದಿರುವ 19 ಪುಟಗಳ ಡೆತ್ ನೋಟ್ ಪ್ರತಿಯೊಬ್ಬರ ಕಣ್ಣಾಲಿಗಳನ್ನು ಒದ್ದೆ ಮಾಡುವಂತಿದೆ. “ಅವಳಿಗೆ ಏನು ಬೇಕಿತ್ತು? ಪ್ರೀತಿಯೋ ಅಥವಾ ಕಾಮವೋ? ಕೇವಲ ಒಂದೂವರೆ ವರ್ಷದಲ್ಲಿ ಮೂವರನ್ನು ಬದಲಾಯಿಸಿದಳು. ಆ ವಿಡಿಯೋ ನೋಡಿದ ಮೇಲೆ ನಾನು ಯಾರ ಮುಂದೆ ಮುಖ ತೋರಿಸಲಿ? ಯಾವ ಹೆಣ್ಣೂ ಕೂಡ ಇಂತಹ ದ್ರೋಹ ಮಾಡಬೇಡಿ” ಎಂದು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಸೀತಾರಾಂ ಪೋಷಕರು ನೀಡಿದ ದೂರಿನ ಮೇರೆಗೆ ಹೈದರಾಬಾದ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಡೆತ್ ನೋಟ್ ಅನ್ನು ಪ್ರಬಲ ಸಾಕ್ಷ್ಯವಾಗಿ ಪರಿಗಣಿಸಿರುವ ಪೊಲೀಸರು, ಪತ್ನಿ ರೇಣುಕಾ ಹಾಗೂ ಆಕೆಯ ಪ್ರಿಯಕರರಾದ ರಮಣಾ ರೆಡ್ಡಿ ಮತ್ತು ಶ್ರವಣ್ ಎಂಬುವವರನ್ನು ಬಂಧಿಸಿದ್ದಾರೆ.
ನಂಬಿಕೆ ದ್ರೋಹಕ್ಕೆ ಸುಂದರ ಕುಟುಂಬವೊಂದು ಬಲಿಯಾಗಿದ್ದು, ತಂದೆ ಸಾವನ್ನಪ್ಪಿ ತಾಯಿ ಜೈಲು ಪಾಲಾದ ಕಾರಣ ಇಬ್ಬರು ಹಸುಗೂಸುಗಳು ಇಂದು ಅನಾಥವಾಗಿವೆ.