ಕಲಬುರಗಿ (ಸೆ. 14): 79ನೇ ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಇದೇ ಸೆಪ್ಟೆಂಬರ್ 16 ಮತ್ತು 17 ರಂದು ಕಲಬುರಗಿ ನಗರದ ವಿವಿಧ ವೇದಿಕೆಗಳಲ್ಲಿ ವೈವಿಧ್ಯಮಯ ಸಾಂಸ್ಕೃತಿಕ, ಸಂಗೀತ, ನೃತ್ಯ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಸಂಭ್ರಮದಲ್ಲಿ ಸಾರ್ವಜನಿಕರು, ಯುವಜನರು ಹಾಗೂ ವಿದ್ಯಾರ್ಥಿಗಳು ತಮ್ಮ ಕುಟುಂಬ ಸಮೇತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉತ್ಸವವನ್ನು ಯಶಸ್ವಿಗೊಳಿಸಬೇಕೆಂದು ರಾಜ್ಯದ ಐ.ಟಿ-ಬಿ.ಟಿ, ಇ-ಆಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಕೋರಿದ್ದಾರೆ.
ಕಲ್ಯಾಣ ಕರ್ನಾಟಕದ ಇತಿಹಾಸ, ಕಲೆ, ಪರಂಪರೆ ಮತ್ತು ಸ್ಥಳೀಯ ಪ್ರತಿಭೆಗಳನ್ನು ಗೌರವಿಸುವ ಉದ್ದೇಶದಿಂದ ಈ ಬೃಹತ್ ಉತ್ಸವ ಹಮ್ಮಿಕೊಳ್ಳಲಾಗಿದೆ. “ನಮ್ಮ ಭಾಗದ ಶ್ರೀಮಂತ ಸಂಸ್ಕೃತಿಯನ್ನು ಒಟ್ಟಾಗಿ ಆಚರಿಸುವ ಜನೋತ್ಸವ ಇದಾಗಿದ್ದು, ಸಾರ್ವಜನಿಕರ ಸಕ್ರಿಯ ಭಾಗವಹಿಸುವಿಕೆಯೇ ಈ ಕಾರ್ಯಕ್ರಮದ ಯಶಸ್ಸು” ಎಂದು ಸಚಿವರು ತಿಳಿಸಿದ್ದಾರೆ.
ಎರಡು ದಿನಗಳ ಪ್ರಮುಖ ಕಾರ್ಯಕ್ರಮಗಳ ವಿವರ:
ಸೆಪ್ಟೆಂಬರ್ 16 (ಬುಧವಾರ):
ಪಬ್ಲಿಕ್ ಗಾರ್ಡನ್: ಸಂಜೆ 6:30 ರಿಂದ ಸ್ಥಳೀಯ ಪ್ರತಿಭೆಗಳಿಂದ ಕಲಾ ಪ್ರದರ್ಶನ ಹಾಗೂ ಶಾಸ್ತ್ರೀಯ ನೃತ್ಯ. ರಾತ್ರಿ 8 ಗಂಟೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಂದ ‘ಸ್ಟ್ರೀಟ್ ಫೆಸ್ಟಿವಲ್’ ಉದ್ಘಾಟನೆ. ರಾತ್ರಿ 8:30 ರಿಂದ 10:00 ರವರೆಗೆ ‘ಸವಾರಿ ಬ್ಯಾಂಡ್’ ತಂಡದಿಂದ ಸಂಗೀತ ಕಾರ್ಯಕ್ರಮ.
ಅಪ್ಪನ ಕೆರೆ: ಸಂಜೆ 7:00 ರಿಂದ ಭೈರವ್ ಮತ್ತು ತಂಡದಿಂದ ಇಂಡೋ-ಫ್ಯೂಷನ್ ವಾದ್ಯ ಪ್ರದರ್ಶನ. ರಾತ್ರಿ 8:30 ಕ್ಕೆ ಕೆರೆ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ರಾತ್ರಿ 9:00 ರಿಂದ 9:30 ರವರೆಗೆ ಆಕರ್ಷಕ 3D ಲೈಟ್ ಮತ್ತು ಡ್ರೋನ್ ಶೋ.
ಸೆಪ್ಟೆಂಬರ್ 17 (ಗುರುವಾರ):
ಪೊಲೀಸ್ ಪರೇಡ್ ಮೈದಾನ: ಬೆಳಿಗ್ಗೆ 9:00 ಕ್ಕೆ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಅಂಗವಾಗಿ ಮುಖ್ಯಮಂತ್ರಿಗಳಿಂದ ರಾಷ್ಟ್ರಧ್ವಜಾರೋಹಣ. ಬೆಳಿಗ್ಗೆ 8:00 ರಿಂದ 11:00 ರವರೆಗೆ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ತಂಡದಿಂದ ಸಮೂಹ ನೃತ್ಯ ಹಾಗೂ ಖ್ಯಾತ ಕಲಾವಿದ ವಿಲಾಸ್ ನಾಯಕ್ ಅವರಿಂದ ಲೈವ್ ಪೇಂಟಿಂಗ್.
ಡಾ. ಎಸ್.ಎಂ. ಪಂಡಿತ್ ರಂಗಮಂದಿರ: ಸಂಜೆ 6:30 ರಿಂದ ಗಣೇಶ ವಂದನೆ, ಸಮಕಾಲೀನ ನೃತ್ಯ ಹಾಗೂ ವಿವೇಕ ಮುರಳಿಧರನ್ ಮತ್ತು ಎಸ್. ಸೋನುವೇಣು ಗೋಪಾಲ ಅವರಿಂದ ಸ್ಟ್ಯಾಂಡಪ್ ಕಾಮಿಡಿ. ರಾತ್ರಿ 8:00 ರಿಂದ 10:00 ರವರೆಗೆ ‘ಅಕೌಸ್ಟಿಕ್ ಸಾಗಾ’ ತಂಡದಿಂದ ಬಹುಭಾಷಾ ಬ್ಯಾಂಡ್.
ಪಬ್ಲಿಕ್ ಗಾರ್ಡನ್: ಸಂಜೆ 6:30 ರಿಂದ ನೃತ್ಯ, ಸುಗಮ ಸಂಗೀತ ಹಾಗೂ ಸೃಷ್ಟಿ ಅವರಿಂದ ಸ್ಟ್ಯಾಂಡಪ್ ಕಾಮಿಡಿ. ರಾತ್ರಿ 8:00 ರಿಂದ 10:00 ರವರೆಗೆ ‘ಝೀ ಕನ್ನಡ ಸರೆಗಮಪಾ’ ತಂಡದಿಂದ ಸಂಗೀತ ರಸಸಂಜೆ.
ಅಪ್ಪನ ಕೆರೆ: ಸಂಜೆ 7:00 ರಿಂದ ರಾತ್ರಿ 9:30 ರವರೆಗೆ ಪ್ರತಿ 30 ನಿಮಿಷಕ್ಕೊಮ್ಮೆ ಧ್ವನಿ ಮತ್ತು ಬೆಳಕು (Sound & Light) ಪ್ರದರ್ಶನ.