ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿದ ಮರಳು ತುಂಬಿದ್ದ ಲಾರಿಯೊಂದು ಮನೆಗೆ ನುಗ್ಗಿ ಪಲ್ಟಿಯಾದ ಭೀಕರ ಘಟನೆ ಯಲಹಂಕ ಸಮೀಪದ ಮಾದನಹಳ್ಳಿಯಲ್ಲಿ ಮುಂಜಾನೆ ಸಂಭವಿಸಿದೆ.
ಯಲಹಂಕ ಕಡೆಯಿಂದ ವೇಗವಾಗಿ ಬರುತ್ತಿದ್ದ ಮರಳು ಲಾರಿಯು ದಿಢೀರ್ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಮನೆಯ ಗೋಡೆಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮನೆಯ ಗೋಡೆ ಸಂಪೂರ್ಣ ಜಖಂಗೊಂಡಿದ್ದು, ಅನಂತರ ಲಾರಿ ರಸ್ತೆಯಲ್ಲೇ ಪಲ್ಟಿಯಾಗಿದೆ. ಘಟನೆಯಲ್ಲಿ ಚಾಲಕ ಲಾರಿಯ ಅಡಿಯಲ್ಲಿ ಸಿಲುಕಿಕೊಂಡಿದ್ದಾನೆ.
ಚಾಲಕನಿಗೆ ನಿದ್ರೆ ಮಂಪರು ಆವರಿಸಿದ್ದೇ ಈ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಕ್ರೇನ್ ಯಂತ್ರ ಬಳಸಿ ಪಲ್ಟಿಯಾದ ಲಾರಿಯನ್ನು ಮೇಲಕ್ಕೆತ್ತಿ, ಅಡಿಯಲ್ಲಿ ಸಿಲುಕಿರುವ ಚಾಲಕನನ್ನು ಹೊರತೆಗೆಯಲು ತೀವ್ರ ಪ್ರಯತ್ನ ನಡೆಸಲಾಗುತ್ತಿದೆ.
ಏಕಾಏಕಿ ಸಂಭವಿಸಿದ ಈ ಘಟನೆಯಿಂದ ಸ್ಥಳೀಯವಾಗಿ ಕೆಲಕಾಲ ತೀವ್ರ ಭೀತಿ ಮತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು.