ಚಿತ್ರದುರ್ಗ: ನವಿಲೊಂದು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದು, ಅದನ್ನು ತಿನ್ನಲು ಹೋದ ಚಿರತೆಯೂ ವಿದ್ಯುತ್ ಅವಘಡಕ್ಕೆ ಬಲಿಯಾಗಿ ಟ್ರಾನ್ಸ್ಫಾರ್ಮರ್ ಮೇಲೆಯೇ ಮೃತಪಟ್ಟಿರುವ ಅಪರೂಪದ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಕಬ್ಬಿನಕೆರೆ ಗ್ರಾಮದಲ್ಲಿ ನಡೆದಿದೆ.
ಕಬ್ಬಿನಕೆರೆ ಗ್ರಾಮದ ಕುಡಿಯುವ ನೀರಿನ ವ್ಯವಸ್ಥೆಗೆ ಅಳವಡಿಸಲಾಗಿರುವ ವಿದ್ಯುತ್ ಟ್ರಾನ್ಸ್ಫಾರ್ಮರ್ ಬಳಿ ಈ ಘಟನೆ ಸಂಭವಿಸಿದೆ. ವಿದ್ಯುತ್ ಸ್ಪರ್ಶದಿಂದ ನವಿಲು ಮೃತಪಟ್ಟಿದೆ ಎನ್ನಲಾಗಿದ್ದು, ಅದರ ಮೃತದೇಹವನ್ನು ತಿನ್ನಲು ಅಥವಾ ಎತ್ತಿಕೊಂಡು ಹೋಗಲು ಪ್ರಯತ್ನಿಸಿದ ವೇಳೆ ಚಿರತೆ ಕೂಡ ವಿದ್ಯುತ್ ಪ್ರವಾಹಕ್ಕೆ ಸಿಲುಕಿದೆ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ.
ವಿದ್ಯುತ್ ಆಘಾತಕ್ಕೆ ಒಳಗಾದ ಚಿರತೆ ಟ್ರಾನ್ಸ್ಫಾರ್ಮರ್ ಮೇಲೆಯೇ ಮೃತಪಟ್ಟಿರುವುದು ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ. ಒಂದೆಡೆ ರಾಷ್ಟ್ರೀಯ ಪಕ್ಷಿ ನವಿಲಿನ ಸಾವು, ಮತ್ತೊಂದೆಡೆ ಅದನ್ನು ಬೇಟೆಯಾಡಲು ಬಂದ ಚಿರತೆಯೂ ಸಾವನ್ನಪ್ಪಿರುವುದು ಈ ಘಟನೆಯನ್ನು ಮತ್ತಷ್ಟು ವಿಚಿತ್ರವಾಗಿಸಿದೆ.
ಘಟನೆ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿದ್ಯುತ್ ಅವಘಡಕ್ಕೆ ನವಿಲು ಮತ್ತು ಚಿರತೆ ಬಲಿಯಾದ ಕುರಿತು ಅಧಿಕಾರಿಗಳು ಪರಿಶೀಲನೆ ಕೈಗೊಂಡಿದ್ದಾರೆ.
ಸ್ಥಳದಿಂದ ನವಿಲು ಹಾಗೂ ಚಿರತೆಯ ಮೃತದೇಹಗಳನ್ನು ತೆರವುಗೊಳಿಸುವ ಕಾರ್ಯವೂ ನಡೆದಿದೆ. ಮೃತದೇಹಗಳ ಮರಣೋತ್ತರ ಪರೀಕ್ಷೆ ಸೇರಿದಂತೆ ಅಗತ್ಯ ಕಾನೂನು ಕ್ರಮಗಳನ್ನು ಅರಣ್ಯ ಇಲಾಖೆ ಕೈಗೊಂಡಿದೆ ಎಂದು ತಿಳಿದುಬಂದಿದೆ.
ಈ ಘಟನೆ ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಅರಣ್ಯ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಘಟನೆಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸುತ್ತಿದ್ದಾರೆ.
ಪ್ರಕೃತಿಯ ಬೇಟೆಗೆ ವಿದ್ಯುತ್ ಬಲೆ!
ಚಿರತೆ ತನ್ನ ಸಹಜ ಆಹಾರವಾದ ನವಿಲನ್ನು ಬೇಟೆಯಾಡಲು ಹೋಗಿ, ಬೇಟೆಯ ಜೊತೆಯಲ್ಲೇ ತಾನೂ ವಿದ್ಯುತ್ ಅವಘಡಕ್ಕೆ ಬಲಿಯಾಗಿರುವುದು ಸ್ಥಳೀಯರಲ್ಲಿ ಚರ್ಚೆಗೆ ಕಾರಣವಾಗಿದೆ.
ನವಿಲಿಗೆ ವಿದ್ಯುತ್ ಸ್ಪರ್ಶ…
ನವಿಲನ್ನು ತಿನ್ನಲು ಬಂದ ಚಿರತೆಗೆ ವಿದ್ಯುತ್ ಮರಣ…
ಒಂದೇ ಸ್ಥಳದಲ್ಲಿ ಬೇಟೆಗಾರ ಮತ್ತು ಬೇಟೆ ಎರಡೂ ಬಲಿ!
ಕಬ್ಬಿನಕೆರೆಯ ಈ ಅಪರೂಪದ ಘಟನೆ ಈಗ ಗ್ರಾಮಸ್ಥರ ನಡುವೆ ಬೇಟೆಗಾರನೇ ಬೇಟೆಯಾದ ವಿಚಿತ್ರ ಪ್ರಕರಣವಾಗಿ ಚರ್ಚೆಯಾಗುತ್ತಿದೆ.
ವರದಿ; ಮಂಜುನಾಥ್ P, ಮೈಸೂರು