ಕೊಚ್ಚಿ: ಮಾನ್ಯ ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಮುಂಜಾನೆ ಅತ್ಯಂತ ಶ್ರದ್ಧಾ-ಭಕ್ತಿಯಿಂದ ಶ್ರೀ ಅಯ್ಯಪ್ಪ ಸ್ವಾಮಿ ಮಾಲೆಯನ್ನು ಧರಿಸುವ ಮೂಲಕ ಶಬರಿಮಲೆ ಪವಿತ್ರ ಯಾತ್ರೆಯನ್ನು ಆರಂಭಿಸಿದ್ದಾರೆ.
ಕೇರಳದ ಕೊಚ್ಚಿಯಲ್ಲಿರುವ ಪ್ರಸಿದ್ಧ ಶ್ರೀ ಸುಬ್ರಮಣ್ಯ ಸ್ವಾಮಿ ದೇವಾಲಯದಲ್ಲಿ ಇಂದು ಮುಂಜಾನೆ ವಿಶೇಷ ಪೂಜೆ ಸಲ್ಲಿಸಿದ ಹೆಚ್.ಡಿ. ಕುಮಾರಸ್ವಾಮಿ ಅವರು, ಗುರುಸ್ವಾಮಿಗಳ ಸಮ್ಮುಖದಲ್ಲಿ ಇರುಮುಡಿ ಕಟ್ಟಿ ಅಯ್ಯಪ್ಪ ಮಾಲೆಯನ್ನು ಧರಿಸಿದರು. ತದನಂತರ ತಮ್ಮ ಆಪ್ತರು ಹಾಗೂ ಪಕ್ಷದ ಪ್ರಮುಖ ಮುಖಂಡರ ಒಳಗೊಂಡ ಭಕ್ತರ ತಂಡದೊಂದಿಗೆ ಶಬರಿಮಲೆಯತ್ತ ಪ್ರಸ್ಥಾನ ಮಾಡಿದರು.
ಕೇಂದ್ರ ಸಚಿವರ ಜೊತೆಯಲ್ಲಿ ಜೆಡಿಎಸ್ ಪಕ್ಷದ ಪ್ರಮುಖ ಜನಪ್ರತಿನಿಧಿಗಳು ಹಾಗೂ ಮಾಜಿ ಶಾಸಕರನ್ನೊಳಗೊಂಡ ಸುಮಾರು 30 ಭಕ್ತರ ದೊಡ್ಡ ತಂಡವೇ ಶಬರಿಮಲೆ ಯಾತ್ರೆ ಕೈಗೊಂಡಿದೆ. ತಂಡದಲ್ಲಿರುವ ಪ್ರಮುಖರು:
ಶ್ರೀ ಸುರೇಶ್ ಬಾಬು – ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರು
ಶ್ರೀ ಸಿ.ಎಸ್. ಪುಟ್ಟರಾಜು – ಮಾಜಿ ಸಚಿವರು
ಶ್ರೀ ಸಾ.ರಾ. ಮಹೇಶ್ – ಮಾಜಿ ಸಚಿವರು
ಶ್ರೀ ಎಸ್.ಎಲ್. ಭೋಜೇಗೌಡ – ವಿಧಾನ ಪರಿಷತ್ ಸದಸ್ಯರು
ಶ್ರೀ ಶರಣಗೌಡ ಕಂದಕೂರ್ – ಶಾಸಕರು
ಶ್ರೀ ಮಾಗಡಿ ಮಂಜುನಾಥ್ – ಮಾಜಿ ಶಾಸಕರು
ಶ್ರೀ ಹೆಚ್.ಎಂ. ರಮೇಶ್ ಗೌಡ – ಮಾಜಿ ಶಾಸಕರು
ತೀವ್ರ ರಾಜಕೀಯ ಹಾಗೂ ಆಡಳಿತಾತ್ಮಕ ಕಾರ್ಯದೊತ್ತಡಗಳ ನಡುವೆಯೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಪ್ರತಿವರ್ಷದಂತೆ ಈ ಬಾರಿಯೂ ಕಟ್ಟುನಿಟ್ಟಿನ ವ್ರತ ಆಚರಿಸಿ, ಕೊಚ್ಚಿಯ ದೇವಸ್ಥಾನದಲ್ಲಿ ಮಾಲೆ ಧರಿಸುವ ಮೂಲಕ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ತೆರಳಿರುವುದು ಅವರ ಧಾರ್ಮಿಕ ನಿಷ್ಠೆಗೆ ಸಾಕ್ಷಿಯಾಗಿದೆ. ರಾಜ್ಯದ ಜನತೆಯ ಕಲ್ಯಾಣ ಹಾಗೂ ಸುಭಿಕ್ಷೆಗಾಗಿ ಈ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.