ಹುಣಸೂರು: ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ರೆಸಾರ್ಟ್ವೊಂದಕ್ಕೆ ನುಗ್ಗಿ, ಪ್ರೇಮಿಗಳ ಮೇಲೆ ಹಲ್ಲೆ ನಡೆಸಿ, ಕೊಲೆ ಬೆದರಿಕೆಯೊಡ್ಡಿ ಬೈಕ್ ಕಸಿದುಕೊಂಡು ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಹುಣಸೂರು ಗ್ರಾಮಾಂತರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಹುಣಸೂರು ನಗರದ ನಿವಾಸಿಗಳಾದ ವೀಲ್ ವಾಸಿಂ, ಶೋಯೆಬ್, ಅಜರ್ ಮತ್ತು ತಾಲೂಕಿನ ಕೊಳವಿಗೆ ಗ್ರಾಮದ ಶ್ರೀಕಾಂತ್ (ಅಲಿಯಾಸ್ ಸಿರಿ) ಎಂದು ಗುರುತಿಸಲಾಗಿದೆ.
ಮೈಸೂರು ಮೂಲದ ಅಸ್ಲಂ ಎಂಬ ಯುವಕ ತನ್ನ ಪ್ರೇಯಸಿಯೊಂದಿಗೆ ಹುಣಸೂರಿನ ರೆಸಾರ್ಟ್ವೊಂದಕ್ಕೆ ಆಗಮಿಸಿದ್ದರು. ಈ ವೇಳೆ ಅಲ್ಲಿಗೆ ನುಗ್ಗಿದ ವೀಲ್ ವಾಸಿಂ ಮತ್ತು ಆತನ ಸ್ನೇಹಿತರು, ಪ್ರೇಮಿಗಳೊಂದಿಗೆ ಇಲ್ಲದ ಗಲಾಟೆ ತೆಗೆದು ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ, ಪ್ರಾಣ ಬೆದರಿಕೆ ಹಾಕಿ ಅಸ್ಲಂ ಅವರ ಬೈಕನ್ನು ಬಲವಂತವಾಗಿ ಕಸಿದುಕೊಂಡು ಸ್ಥಳದಿಂದ ಪರಾರಿಯಾಗಿದ್ದರು.
ಬಳಿಕ ಆರೋಪಿಗಳು ಕದ್ದ ಬೈಕನ್ನು ಕೊಳವಿಗೆಯ ಶ್ರೀಕಾಂತ್ ಎಂಬಾತನ ಬಳಿ ಅಡವಿಟ್ಟು 30 ಸಾವಿರ ರೂಪಾಯಿ ಹಣ ಪಡೆದುಕೊಂಡಿದ್ದರು. ಈ ದೌರ್ಜನ್ಯದ ಕುರಿತು ಸಂತ್ರಸ್ತ ಅಸ್ಲಂ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಮುಖ್ಯ ಆರೋಪಿ ವೀಲ್ ವಾಸಿಂ ಎಂಬಾತನ ಮೇಲೆ ಈಗಾಗಲೇ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುವುದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ಇಳಿದ ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಸಂತೋಷ್ ಕಶ್ಯಪ್ ಹಾಗೂ ಅವರ ಸಿಬ್ಬಂದಿಗಳ ತಂಡ ಸತತ ಪ್ರಯತ್ನ ನಡೆಸಿ ನಾಲ್ವರೂ ಆರೋಪಿಗಳನ್ನು ಜಾಲಕ್ಕೆ ಕೆಡವಿದ್ದಾರೆ.
ಬಂಧಿತರನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಬೈಕ್ ಅಡವಿಟ್ಟಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆರೋಪಿಗಳು ನಡೆಸಿರುವ ಗಂಭೀರ ಹಲ್ಲೆಯನ್ನು ಪರಿಗಣಿಸಿ, ಅವರ ವಿರುದ್ಧ ಕೊಲೆಯತ್ನ (Attempt to Murder) ಪ್ರಕರಣ ದಾಖಲಿಸಲಾಗಿದ್ದು, ಸದ್ಯ ನಾಲ್ವರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.