ಬೆಂಗಳೂರು: ಮದ್ಯ ಖರೀದಿಸುವ ವೇಳೆ ದರದ ವಿಚಾರಕ್ಕೆ ಸಂಬಂಧಿಸಿದಂತೆ ಶುರುವಾದ ವಾಗ್ವಾದವು ಮಾರಾಮಾರಿಗೆ ತಿರುಗಿ, ಯುವಕರ ಗುಂಪೊಂದು ಬಾರ್ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಗರದ ನಾಗರಬಾವಿಯಲ್ಲಿರುವ ಮಿಲೇನಿಯಮ್ ಬಾರ್ನಲ್ಲಿ ನಡೆದಿದೆ.
ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಮದ್ಯ ಖರೀದಿಸಲು ಬಂದಿದ್ದ ಯುವಕರ ಗುಂಪು ಹಾಗೂ ಬಾರ್ ಸಿಬ್ಬಂದಿ ನಡುವೆ ಮದ್ಯದ ದರದ ವಿಚಾರವಾಗಿ ಮಾತಿನ ಚಕಮಕಿ ನಡೆದಿದೆ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ರೊಚ್ಚಿಗೆದ್ದ ಯುವಕರು ಬಾರ್ ಸಿಬ್ಬಂದಿ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ.
ಈ ವೇಳೆ ಯುವಕರ ಗುಂಪಿನಲ್ಲಿದ್ದ ಕೆಲವರು ಬಿಯರ್ ಬಾಟಲಿಯಿಂದಲೂ ಸಿಬ್ಬಂದಿಗೆ ಹೊಡೆದು ತೀವ್ರವಾಗಿ ಗಾಯಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಬಾರ್ನೊಳಗೆ ನಡೆದ ಈ ದಿಢೀರ್ ಗಲಾಟೆಯಿಂದಾಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಗಲಾಟೆ ಕಂಡು ಅಲ್ಲಿದ್ದ ಇತರ ಗ್ರಾಹಕರು ಗಾಬರಿಗೊಂಡು ಹೊರಬಂದಿದ್ದಾರೆ.
ಘಟನೆ ಕುರಿತು ಮಾಹಿತಿ ಪಡೆದ ಚಂದ್ರಲೇಔಟ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಬಾರ್ನಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು, ಹಲ್ಲೆಗೈದು ಪರಾರಿಯಾಗಿರುವ ಆರೋಪಿಗಳ ಪತ್ತೆಗಾಗಿ ತೀವ್ರ ಶೋಧ ಕಾರ್ಯ ಆರಂಭಿಸಿದ್ದಾರೆ.