ಬೆಂಗಳೂರು: ನಗರದ ಜೆ.ಪಿ. ನಗರದಲ್ಲಿ ಭೀಕರ ಘಟನೆಯೊಂದು ನಡೆದಿದ್ದು, ಹೆಂಡತಿಯನ್ನು ಅಟ್ಟಾಡಿಸಿಕೊಂಡು ಬಂದ ಪತಿಯೊಬ್ಬ ಆಸಿಡ್ ಎರಚಿ, ಮಚ್ಚಿನಿಂದ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.
ಜೆ.ಪಿ. ನಗರದ 3ನೇ ಹಂತದ ನಾರಾಯಣ ಕ್ಲೀನಿಕ್ ಬಳಿ ಈ ಕೃತ್ಯ ನಡೆದಿದ್ದು, ಕಳೆದ ಒಂದೂವರೆ ವರ್ಷದಿಂದ ಅದೇ ಕ್ಲೀನಿಕ್ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಮಧುಮಿತ (26) ಹಲ್ಲೆಗೊಳಗಾದ ದುರ್ದೈವಿ.
ಘಟನೆಯ ವಿವರ:
ಬೆಳಗ್ಗೆ ಸುಮಾರು 9.15ರ ವೇಳೆಗೆ ಮಧುಮಿತ ತಿಂಡಿ ತಿನ್ನಲು ಕ್ಲೀನಿಕ್ನಿಂದ ಹೊರಬಂದಾಗ, ಬೈಕ್ನಲ್ಲಿ ಬಂದ ಪತಿ ವೆಂಕಟೇಶ್ ದಾಳಿಗೆ ಮುಂದಾಗಿದ್ದಾನೆ. ಪ್ರಾಣಭೀತಿಯಿಂದ ಆಸ್ಪತ್ರೆಯ ಪಾರ್ಕಿಂಗ್ ಜಾಗದತ್ತ ಓಡಿಬಂದ ಮಧುಮಿತ ಅವರ ಮೇಲೆ ಚಾಕು, ಮಚ್ಚು ಹಾಗೂ ಆಸಿಡ್ನೊಂದಿಗೆ ಬಂದಿದ್ದ ವೆಂಕಟೇಶ್ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.
ಸ್ಥಳೀಯರು ಕಲ್ಲಿನಿಂದ ಹೊಡೆದು ಮಹಿಳೆಯ ರಕ್ಷಣೆಗೆ ಯತ್ನಿಸಿದಾಗ ಅವರ ಮೇಲೆಯೂ ಆರೋಪಿ ಹಲ್ಲೆಗೆ ಮುಂದಾಗಿದ್ದ. ಬಳಿಕ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿಯನ್ನು ಸಮೀಪದ ಸಿಗ್ನಲ್ನಲ್ಲಿದ್ದ ಸಂಚಾರ ಪೊಲೀಸರು ಮತ್ತು ಸ್ಥಳೀಯರ ನೆರವಿನಿಂದ ಜೆ.ಪಿ. ನಗರ ಪೊಲೀಸರು ಬಂಧಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿರುವ ಮಧುಮಿತ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಜೆ.ಪಿ. ನಗರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದಾಳಿಗೆ ನಿಖರ ಕಾರಣವೇನು ಎಂಬ ಕುರಿತು ಪೊಲೀಸರು ಸುದೀರ್ಘ ವಿಚಾರಣೆ ಮುಂದುವರಿಸಿದ್ದಾರೆ.
