ಬೆಂಗಳೂರು: ಇಂದಿನ ಧಾವಂತದ ಬದುಕಿನಲ್ಲಿ ಮೇಲ್ನೋಟಕ್ಕೆ ಅಥವಾ ಸನ್ನಿವೇಶಕ್ಕೆ ತಕ್ಕಂತೆ ಜನರನ್ನು ತಪ್ಪಾಗಿ ಅಳೆಯುವುದು ಸಾಮಾನ್ಯ. ಆದರೆ ನಿಜ ಜೀವನದಲ್ಲಿ ಸನ್ನಿವೇಶಗಳೆಲ್ಲವೂ ನಕಾರಾತ್ಮಕವಾಗಿರುವುದಿಲ್ಲ ಎಂಬುದಕ್ಕೆ, ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ನೈಜ ಘಟನೆಯೊಂದೇ ಸಾಕ್ಷಿ.
ದಿನದ ಕೆಲಸ ಮುಗಿಸಿ ಮೆಟ್ರೋ ನಿಲ್ದಾಣದಿಂದ ತನ್ನ ಗಮ್ಯಸ್ಥಾನ ತಲುಪಲು ಯುವತಿಯೊಬ್ಬಳು ರಾಪಿಡೋ (Rapido) ಬೈಕ್ ರೈಡ್ ಬುಕ್ ಮಾಡಿದ್ದಳು. ಪ್ರಯಾಣ ಆರಂಭವಾದ ಕೆಲವೇ ನಿಮಿಷಗಳಲ್ಲಿ, ಜನಸಂದಣಿಯಿಲ್ಲದ ಅಪರಿಚಿತ ಸ್ಥಳದಲ್ಲಿ ಬೈಕ್ ತಾಂತ್ರಿಕ ತೊಂದರೆಯಿಂದ ಪದೇ ಪದೇ ಕೆಟ್ಟು ನಿಲ್ಲಲು ಆರಂಭಿಸಿತು. ಒಂಟಿ ಪ್ರಯಾಣದಲ್ಲಿದ್ದ ಯುವತಿಯ ಮನಸ್ಸಿನಲ್ಲಿ ತಕ್ಷಣವೇ ಆತಂಕ ಮೂಡಿ, ಚಾಲಕನ ಉದ್ದೇಶದ ಕುರಿತು ನಾನಾ ರೀತಿಯ ಭಯ ಹಾಗೂ ಸಂಶಯಗಳು ಕಾಡಿದವು.
ಆದರೆ, ಯುವತಿಯ ಆತಂಕವನ್ನು ಸುಳ್ಳು ಮಾಡಿದ ಚಾಲಕ, ಸಮಾಧಾನದಿಂದ ಬೈಕ್ ಸರಿಪಡಿಸಿ ಆಕೆಯನ್ನು ಸುರಕ್ಷಿತವಾಗಿ ಗಮ್ಯಸ್ಥಾನಕ್ಕೆ ತಲುಪಿಸಿದನು.
ಆತುರದಲ್ಲಿ ಆಯಿತು ಎಡವಟ್ಟು:
ಸುರಕ್ಷಿತವಾಗಿ ತಲುಪಿದ ಬಳಿಕ, 100 ರೂಪಾಯಿ ಬಾಡಿಗೆ ಪಾವತಿಸುವ ಗೊಂದಲದಲ್ಲಿ ಯುವತಿ ಆತುರದಿಂದ ಆನ್ಲೈನ್ ಮೂಲಕ 1,000 ರೂಪಾಯಿಗಳನ್ನು ಕಳುಹಿಸಿಬಿಟ್ಟಿದ್ದಳು.
ಪ್ರಾಮಾಣಿಕತೆಗೆ ಮೆಚ್ಚುಗೆ:
ಖಾತೆಗೆ ಹೆಚ್ಚಿನ ಹಣ ಜಮಾ ಆಗಿರುವುದನ್ನು ಗಮನಿಸಿದ ರೈಡರ್, ತಡಮಾಡದೇ ತಕ್ಷಣವೇ 900 ರೂಪಾಯಿಗಳನ್ನು ಯುವತಿಯ ಖಾತೆಗೆ ವಾಪಸ್ (Refund) ಕಳುಹಿಸಿದನು. ತಾನು ತಪ್ಪಾಗಿ ಯೋಚಿಸಿದ್ದ ವ್ಯಕ್ತಿಯ ಪ್ರಾಮಾಣಿಕತೆ ಕಂಡು ಯುವತಿ ಅಚ್ಚರಿ ಪಟ್ಟಿದ್ದಲ್ಲದೆ, ತನ್ನ ಧೋರಣೆಯ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾಳೆ.
”ಯಾರನ್ನೇ ಆಗಲಿ ಸನ್ನಿವೇಶ ನೋಡಿ ಕೆಟ್ಟವರೆಂದು ತೀರ್ಮಾನಿಸಬಾರದು” ಎಂಬ ಸುಂದರ ಸಂದೇಶ ಸಾರುತ್ತಿರುವ ಈ ಘಟನೆಗೆ ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.