ಚಿಕ್ಕಮಗಳೂರು: ಹೊಸ ಲೇಔಟ್ನಲ್ಲಿ ಟ್ರಾನ್ಸ್ಫಾರ್ಮರ್ (ಟಿ.ಸಿ) ನಿರ್ಮಾಣಕ್ಕೆ ಅನುಮತಿ ನೀಡಲು ಸಾರ್ವಜನಿಕರಿಂದ ಲಂಚ ಪಡೆಯುತ್ತಿದ್ದ ಮೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರರು (ಎಇಇ) ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ಮೆಸ್ಕಾಂ ಕಚೇರಿಯ ಎಇಇ ತಿರುಪತಿ ನಾಯ್ಕ ಲೋಕಾಯುಕ್ತ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿಯಾಗಿದ್ದಾರೆ.
ಸ್ಥಳೀಯ ನಿವಾಸಿ ಲೋಕೇಶ್ ಎಂಬುವವರು ಹೊಸದಾಗಿ ನಿರ್ಮಿಸುತ್ತಿರುವ ಲೇಔಟ್ಗೆ ಟಿ.ಸಿ ಅಳವಡಿಸಲು ಅನುಮತಿ ಕೋರಿ ಮೆಸ್ಕಾಂ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಈ ಕೆಲಸ ಮಾಡಿಕೊಡಲು ಎಇಇ ತಿರುಪತಿ ನಾಯ್ಕ ಅವರು ₹5,000 ಲಂಚ ನೀಡುವಂತೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ. ಲಂಚ ನೀಡಲು ಮನಸ್ಸಿಲ್ಲದ ಲೋಕೇಶ್ ಅವರು ಈ ಬಗ್ಗೆ ಚಿಕ್ಕಮಗಳೂರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ದೂರುದಾರರಿಂದ ಕಡೂರಿನ ಮೆಸ್ಕಾಂ ಕಚೇರಿಯಲ್ಲೇ ಎಇಇ ತಿರುಪತಿ ನಾಯ್ಕ ಅವರು ₹5,000 ನಗದು ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ವೇಳೆ ಹೊಂಚು ಹಾಕಿದ್ದ ಲೋಕಾಯುಕ್ತ ಅಧಿಕಾರಿಗಳು ಮುಗಿಬಿದ್ದು, ಹಣದ ಸಮೇತ ಆರೋಪಿಯನ್ನು ಜಾಗದಲ್ಲೇ ವಶಕ್ಕೆ ಪಡೆದಿದ್ದಾರೆ.
ಚಿಕ್ಕಮಗಳೂರು ಲೋಕಾಯುಕ್ತ ಡಿವೈಎಸ್ಪಿ ಆರ್. ತಿರುಮಲೇಶ್ ಅವರ ನೇತೃತ್ವದ ತಂಡ ಈ ಯಶಸ್ವಿ ದಾಳಿ ನಡೆಸಿದೆ. ಸದ್ಯ ಲೋಕಾಯುಕ್ತ ಪೊಲೀಸರು ಭ್ರಷ್ಟ ಅಧಿಕಾರಿ ತಿರುಪತಿ ನಾಯ್ಕ ಅವರನ್ನು ಬಂಧಿಸಿ, ಲಂಚದ ಹಣವನ್ನು ಜಪ್ತಿ ಮಾಡಿದ್ದಾರೆ. ಕಡೂರು ಮೆಸ್ಕಾಂ ಕಚೇರಿಯಲ್ಲಿ ಮಹಜರು ಪ್ರಕ್ರಿಯೆ ಮುಂದುವರಿದಿದ್ದು, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.