ಬೆಂಗಳೂರು: ಪಟಾಕಿ ಕೊಡಿಸುವುದಾಗಿ ನೆರೆಮನೆಯ 13 ವರ್ಷದ ಬಾಲಕನನ್ನು ಕಾರಿನಲ್ಲಿ ಕರೆದೊಯ್ದು, ಹಣಕ್ಕಾಗಿ ಬೇಡಿಕೆಯಿಟ್ಟು ಬಳಿಕ ಭೀಕರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಯಲಹಂಕದ ವಿನಾಯಕ ನಗರದಲ್ಲಿ ನಡೆದಿದೆ.
ಯಲಹಂಕದ ವಿನಾಯಕ ನಗರ ನಿವಾಸಿ ಪ್ರಜ್ವಲ್ (13) ಕೊಲೆಯಾದ ದುರ್ದೈವಿ ಬಾಲಕ. ನೆರೆಮನೆಯ ನಿವಾಸಿ ಭಾಸ್ಕರ್ ರೆಡ್ಡಿ ಎಂಬಾತನೇ ಈ ಕೃತ್ಯ ಎಸಗಿದ ಸೈಕೋ ಕಿಲ್ಲರ್.
ಹಣಕ್ಕಾಗಿ ಬೆದರಿಕೆ – ರಕ್ತಪಿಪಾಸುಗಳ ಅಮಾನವೀಯ ಕೃತ್ಯ:
ಸಂಜೆ ವೇಳೆ ಪಟಾಕಿ ತರೋಣ ಬಾ ಎಂದು ನಂಬಿಸಿ ಭಾಸ್ಕರ್ ರೆಡ್ಡಿ ಬಾಲಕ ಪ್ರಜ್ವಲ್ನನ್ನು ತನ್ನ ಕಾರಿನಲ್ಲಿ ಕರೆದೊಯ್ದಿದ್ದ. ಬಳಿಕ ಬಾಲಕನಿಂದ ವಿಡಿಯೋ ಮಾಡಿಸಿ, ಆತನ ಪೋಷಕರಿಗೆ ಹಣಕ್ಕಾಗಿ ಬೆದರಿಕೆ ಹಾಕಿದ್ದ. ಈ ನಡುವೆ ಮಗುವಿಗಾಗಿ ಹುಡುಕಾಟ ನಡೆಸುತ್ತಿದ್ದ ಪೋಷಕರು ಆರೋಪಿ ಭಾಸ್ಕರ್ ರೆಡ್ಡಿಯ ತಂದೆಗೆ ವಿಷಯ ತಿಳಿಸಿದ್ದರು. ಇಬ್ಬರೂ ಸೇರಿ ಬಾಲಕನನ್ನು ಕ್ಷೇಮವಾಗಿ ಕರೆತರುವಂತೆ ವಾರ್ನಿಂಗ್ ಮಾಡಿದ್ದರಿಂದ, ಪರಿಚಯದವನೇ ಆಗಿದ್ದರಿಂದ ಪೋಷಕರು ಬರುವ ನಿರೀಕ್ಷೆಯಲ್ಲಿದ್ದರು.
ಆದರೆ, ಕಾರಿನಲ್ಲಿದ್ದ ಆರೋಪಿ ಭಾಸ್ಕರ್ ರೆಡ್ಡಿ ಹಾಗೂ ಆತನ ಜೊತೆಯಲ್ಲಿದ್ದ ಏಡುಕುಂಡಲರೆಡ್ಡಿ ಎಂಬಾತ ಬಾಲಕನ ಕೈ-ಕಾಲು ಮತ್ತು ಬಾಯಿಗೆ ಟೇಪ್ ಸುತ್ತಿ ಹಲ್ಲೆ ನಡೆಸಿದ್ದಾರೆ. ಬಳಿಕ ನಿರ್ಜನ ಪ್ರದೇಶದ ಕಾಂಪೌಂಡ್ ಒಂದರ ಒಳಗೆ ಎಸೆದಿದ್ದಾರೆ. ಆ ವೇಳೆ ಬಾಲಕ ‘ಅಮ್ಮಾ ಅಮ್ಮಾ’ ಎಂದು ನರಳಾಡುತ್ತಿದ್ದರೂ ಕರುಣೆ ತೋರದೆ, ಆತನ ಮುಖ ಮತ್ತು ತಲೆಯ ಮೇಲೆ ಹ್ಯಾಲೋಬ್ರಿಕ್ (ಸಿಮೆಂಟ್ ಸ್ಲ್ಯಾಬ್) ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಅಪಘಾತದ ನಾಟಕ – ಪೊಲೀಸರ ಕೈಗೆ ಲಾಕ್:
ಹತ್ಯೆಯ ಬಳಿಕ ಮೃತದೇಹವನ್ನು ಹೂಳಲು ಸಾಧ್ಯವಾಗದೆ, ಕಾರಿನ ಡಿಕ್ಕಿಯಲ್ಲೇ ಇಟ್ಟುಕೊಂಡು ಆಂಧ್ರಪ್ರದೇಶದತ್ತ ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಗಾಬರಿಯಲ್ಲಿ ಚಿಕ್ಕಜಾಲ ಸರ್ವೀಸ್ ರಸ್ತೆಯಲ್ಲಿ ಸ್ವಿಫ್ಟ್ ಕಾರು ಹಾಗೂ ಫುಟ್ಪಾತ್ಗೆ ಡಿಕ್ಕಿ ಹೊಡೆದು ಸರಣಿ ಅಪಘಾತ ಎಸಗಿದ್ದಾರೆ. ಸ್ಥಳೀಯರು ಆರೋಪಿಯನ್ನು ತಡೆದು ನಿಲ್ಲಿಸಿದ್ದು, ಸ್ಥಳಕ್ಕಾಗಮಿಸಿದ ಚಿಕ್ಕಜಾಲ ಠಾಣೆ ಪೊಲೀಸರು ಕಾರಿನ ಡಿಕ್ಕಿ ಪರಿಶೀಲಿಸಿದಾಗ ಬಾಲಕನ ಶವ ಪತ್ತೆಯಾಗಿದೆ.
ಆರಂಭದಲ್ಲಿ ಬಾಲಕ ಕಾರಿಗೆ ಅಡ್ಡಬಂದು ಅಪಘಾತದಿಂದ ಮೃತಪಟ್ಟಿದ್ದಾನೆ ಎಂದು ಆರೋಪಿ ನಾಟಕವಾಡಲು ಯತ್ನಿಸಿದ್ದ. ಆದರೆ ಪೊಲೀಸರ ತೀವ್ರ ವಿಚಾರಣೆ ಹಾಗೂ ಪ್ರಾಥಮಿಕ ತನಿಖೆಯಲ್ಲಿ ಇದು ಹಣಕ್ಕಾಗಿ ನಡೆದಿರುವ ಪಕ್ಕಾ ಪ್ಲ್ಯಾನ್ಡ್ ಕೊಲೆ ಎಂಬುದು ಬಯಲಾಗಿದೆ.
ಸದ್ಯ ಮುಖ್ಯ ಆರೋಪಿ ಭಾಸ್ಕರ್ ರೆಡ್ಡಿಯನ್ನು ಚಿಕ್ಕಜಾಲ ಪೊಲೀಸರು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಏಡುಕುಂಡಲ ರೆಡ್ಡಿಗಾಗಿ ಜಾಲ ಬೀಸಿದ್ದಾರೆ.