ಹಾವೇರಿ: ಪರವಾನಗಿ ನಿಯಮಗಳನ್ನು ಉಲ್ಲಂಘಿಸಿ ಕಲ್ಲು ಗಣಿಗಾರಿಕೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯ 46 ಕಲ್ಲು ಕ್ವಾರಿ ಹಾಗೂ ಕ್ರಷರ್ ಗುತ್ತಿಗೆದಾರರಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಒಟ್ಟು ₹26.32 ಕೋಟಿ ದಂಡ ವಿಧಿಸಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.
ವಿಶೇಷವೆಂದರೆ, ಈ ದಂಡದ ಪಟ್ಟಿಯಲ್ಲಿ ಸಕ್ಕರೆ ಮತ್ತು ಜವಳಿ ಸಚಿವ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಅವರ ರಾಣೆಬೆನ್ನೂರು ತಾಲೂಕಿನ ಹುಣಸಿಕಟ್ಟಿ ಬಳಿಯ ಕ್ವಾರಿಯೂ ಸೇರಿದ್ದು, ಅವರಿಗೆ ಅಂದಾಜು ₹3 ಕೋಟಿ ದಂಡ ವಿಧಿಸಲಾಗಿದೆ ಎಂದು ಇಲಾಖೆಯ ಮೂಲಗಳು ದೃಢಪಡಿಸಿವೆ.
ಡ್ರೋನ್ ಸಮೀಕ್ಷೆಯಿಂದ ಬಯಲಾಯ್ತು ಉಲ್ಲಂಘನೆ:
ಕ್ವಾರಿ ಪ್ರದೇಶಗಳಲ್ಲಿ ನಡೆಯುತ್ತಿರುವ ಅಕ್ರಮ ಹಾಗೂ ನಿಯಮ ಉಲ್ಲಂಘನೆಯನ್ನು ಪತ್ತೆಹಚ್ಚಲು ‘ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಶನ್ಸ್ ಸೆಂಟರ್’ (KSRSAC) ನೆರವಿನಿಂದ 2022ರಿಂದ 2024ರ ಅವಧಿಯಲ್ಲಿ ಜಿಲ್ಲೆಯ 68 ಕ್ವಾರಿ-ಕ್ರಷರ್ ಸ್ಥಳಗಳಲ್ಲಿ ಡ್ರೋನ್ ಸಮೀಕ್ಷೆ ನಡೆಸಲಾಗಿತ್ತು. ಡ್ರೋನ್ ಛಾಯಾಚಿತ್ರಗಳು ಮತ್ತು ಕಲ್ಲು ತೆಗೆದಿರುವ ಪ್ರಮಾಣವನ್ನು ಇಲಾಖೆಯ ಅಧಿಕೃತ ದಾಖಲೆಗಳೊಂದಿಗೆ ಹೋಲಿಸಿ ಪರಿಶೀಲಿಸಿದಾಗ 46 ಗುತ್ತಿಗೆದಾರರು ನಿಯಮ ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಂಡದ ಲೆಕ್ಕಾಚಾರ ಹೀಗಿದೆ:
ಪರವಾನಗಿ ಪಡೆದ ಪ್ರದೇಶದಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿ ಕಲ್ಲು ತೆಗೆದಿದ್ದರೆ ಟನ್ಗೆ ₹70 ದಂಡ.
ಪರವಾನಗಿ ಗಡಿ ಮೀರಿ ಅಕ್ಕಪಕ್ಕದ ಜಾಗ ಒತ್ತುವರಿ ಮಾಡಿ ಕಲ್ಲು ತೆಗೆದಿದ್ದರೆ ಟನ್ಗೆ ₹140 ದಂಡ.
ದಂಡ ಪಾವತಿಸಲು 6 ತಿಂಗಳ ಕಾಲಾವಕಾಶ ನೀಡಲಾಗಿದ್ದು, ಸಚಿವ ರುದ್ರಪ್ಪ ಲಮಾಣಿ ಅವರಿಗೆ ಮೂರು ಕಂತುಗಳಲ್ಲಿ ದಂಡ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.
ಪ್ರಭಾವಿಗಳಿಗೂ ದಂಡದ ಬಿಸಿ:
ಸಚಿವರಷ್ಟೇ ಅಲ್ಲದೆ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಅವರ ಪುತ್ರ ಪುಲಿಕೇಶಿ ಹಾಗೂ ಸಹೋದರ ಪರಮೇಶ್ವರಪ್ಪ ಶಿವಣ್ಣನವರ ಒಡೆತನದ ಕ್ವಾರಿಗಳಿಗೂ ದಂಡ ವಿಧಿಸಲಾಗಿದೆ. ಅಲ್ಲದೆ ಕಜ್ಜರಿ ಗ್ರಾಮದ ಕ್ವಾರಿ ಮಾಲೀಕ ನಾಗರಾಜ ಆನ್ವೇರಿ ಅವರಿಗೂ ಸುಮಾರು ₹1 ಕೋಟಿ ದಂಡದ ನೋಟಿಸ್ ಜಾರಿಯಾಗಿದೆ.
”ನಾವು ಪರವಾನಗಿ ನಿಯಮಗಳಂತೆಯೇ ಕ್ವಾರಿ ನಡೆಸುತ್ತಿದ್ದರೂ ಏಕಾಏಕಿ ಕೋಟ್ಯಂತರ ರೂಪಾಯಿ ದಂಡ ವಿಧಿಸಿರುವುದು ಸಂಪೂರ್ಣ ಅವೈಜ್ಞಾನಿಕ. ಈ ಕ್ರಮವನ್ನು ಖಂಡಿಸಿ ಸೆಪ್ಟೆಂಬರ್ 18ರಿಂದ ಜಿಲ್ಲೆಯ ಎಲ್ಲಾ ಕಲ್ಲು ಕ್ವಾರಿ ಹಾಗೂ ಕ್ರಷರ್ಗಳ ಕಾರ್ಯಾಚರಣೆ ಮತ್ತು ಉತ್ಪಾದನೆ ಸ್ಥಗಿತಗೊಳಿಸಿ ಹೋರಾಟ ನಡೆಸಲಿದ್ದೇವೆ.”
— ಬಸವರಾಜ ಭ. ಬೆಳವಡಿ, ಅಧ್ಯಕ್ಷರು, ಹಾವೇರಿ ಜಿಲ್ಲಾ ಕ್ರಷರ್ಸ್ ಹಾಗೂ ಕ್ವಾರಿ ಓನರ್ಸ್ ಅಸೋಸಿಯೇಷನ್
”68 ಸ್ಥಳಗಳಲ್ಲಿ ನಡೆಸಿದ ಡ್ರೋನ್ ಸಮೀಕ್ಷೆ ಹಾಗೂ ಇಲಾಖೆಯ ದಾಖಲೆಗಳ ಸುದೀರ್ಘ ಪರಿಶೀಲನೆ ಬಳಿಕ ನಿಯಮ ಉಲ್ಲಂಘಿಸಿದ 46 ಗುತ್ತಿಗೆದಾರರಿಗೆ ₹26.32 ಕೋಟಿ ದಂಡ ವಿಧಿಸಲಾಗಿದೆ. ನಿಗದಿತ ಅವಧಿಯಲ್ಲಿ ದಂಡ ಪಾವತಿಸದಿದ್ದರೆ ಕಾನೂನುಬದ್ಧ ಮುಂದಿನ ಕ್ರಮ ಜರುಗಿಸಲಾಗುವುದು.”
— ಟಿ.ವಿ. ಪುಷ್ಪಾ, ಹಿರಿಯ ಭೂ ವಿಜ್ಞಾನಿ