ಬೆಂಗಳೂರು: ಸಿಲಿಕಾನ್ ಸಿಟಿಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹವು ಈಗ ಅಕ್ಷರಶಃ ಅಕ್ರಮ ಚಟುವಟಿಕೆಗಳ ಅಡ್ಡೆಯಾಗಿ ಮಾರ್ಪಟ್ಟಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಜೈಲಿನೊಳಗೆ ನಡೆದ ಸರಣಿ ಅಕ್ರಮಗಳಿಗೆ ಸಂಬಂಧಿಸಿದಂತೆ ಬರೋಬ್ಬರಿ 44 ಎಫ್ಐಆರ್ಗಳು (FIR) ದಾಖಲಾಗಿರುವುದು ಈಗ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿಸಿದೆ.
ಜೈಲಿನ ಕಟ್ಟುನಿಟ್ಟಿನ ಭದ್ರತೆಯ ನಡುವೆಯೂ ಕೈದಿಗಳು ಮೊಬೈಲ್ ಫೋನ್ ಬಳಸುವುದು, ಗಾಂಜಾ ಸೇದುವುದು ಹಾಗೂ ಗುಂಪು ಘರ್ಷಣೆಗಳಲ್ಲಿ ತೊಡಗುವುದು ಸಾಮಾನ್ಯ ಎಂಬಂತಾಗಿದೆ. ಇತ್ತೀಚೆಗೆ ಕೈದಿಗಳು ಜೈಲಿನಲ್ಲೇ ಮೊಬೈಲ್ ಬಳಸಿ ನೃತ್ಯ ಮಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜೈಲು ಆಡಳಿತದ ವೈಫಲ್ಯಕ್ಕೆ ಹಿಡಿದ ಕನ್ನಡಿಯಂತಿದೆ.
ಈ ಅಕ್ರಮಗಳಲ್ಲಿ ಕೈದಿಗಳಿಗಿಂತ ಜೈಲು ಸಿಬ್ಬಂದಿಗಳ ಪಾತ್ರವೇ ಹೆಚ್ಚಿದೆ ಎಂಬ ಆಘಾತಕಾರಿ ಸತ್ಯ ತನಿಖೆಯಿಂದ ಹೊರಬಂದಿದೆ. ಕೈದಿಗಳಿಗೆ ಗಾಂಜಾ ಮತ್ತು ನಗದು ತಲುಪಿಸುತ್ತಿದ್ದ ಜೈಲು ವಾರ್ಡನ್ ಪ್ರಕಾಶ್ ಗಾವಡೆ ಎಂಬಾತನನ್ನು ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ. ಕೇವಲ ಹತ್ತು ಸಾವಿರ ರೂಪಾಯಿ ಆಮಿಷಕ್ಕೆ ಒಳಗಾಗಿ ಈತ ಈ ದೇಶದ್ರೋಹದ ಕೆಲಸಕ್ಕೆ ಕೈಹಾಕಿದ್ದ ಎನ್ನಲಾಗಿದೆ. ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
ಜೈಲಿನೊಳಗೆ ಕೈದಿಗಳಿಗೆ ‘ನೆಟ್ಫ್ಲಿಕ್ಸ್’ ನಂತಹ ಐಷಾರಾಮಿ ಸೌಲಭ್ಯಗಳು ಸಿಗುತ್ತಿವೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಬೆನ್ನಲ್ಲೇ ಎಚ್ಚೆತ್ತಿರುವ ಡಿಜಿಪಿ ಅಲೋಕ್ ಕುಮಾರ್ ಅವರು ಜೈಲು ಸುಧಾರಣೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಜಾಮರ್ಗಳ ಆಧುನೀಕರಣ: ಮೊಬೈಲ್ ಸಂಪರ್ಕ ಕಡಿತಗೊಳಿಸಲು ಹಳೆಯ ಜಾಮರ್ಗಳ ಬದಲಿಗೆ ಆಧುನಿಕ ತಂತ್ರಜ್ಞಾನ ಅಳವಡಿಕೆ.
ಸಿಸಿಟಿವಿ ಕಣ್ಗಾವಲು: ಕಾರಾಗೃಹದ ಪ್ರತಿಯೊಂದು ಮೂಲೆಯಲ್ಲೂ ನಿಗಾ ಇಡಲು ಸಿಸಿಟಿವಿಗಳ ಹೆಚ್ಚಳ.
ವಿಶೇಷ ಸಭೆ: ವಿಚಾರಣಾಧೀನ ಕೈದಿಗಳ ಮೇಲಿನ ಒತ್ತಡ ಕಡಿಮೆ ಮಾಡಲು ಬೆಂಗಳೂರು ಡಿಸಿಪಿಗಳೊಂದಿಗೆ ಸಭೆ ನಡೆಸಲಾಗಿದ್ದು, ಚಾರ್ಜ್ಶೀಟ್ಗಳನ್ನು ತ್ವರಿತವಾಗಿ ಸಲ್ಲಿಲು ಸೂಚಿಸಲಾಗಿದೆ.
ಪರಪ್ಪನ ಅಗ್ರಹಾರದ ಈ ‘ರಾಜಾತಿಥ್ಯ’ಕ್ಕೆ ಈ ಬಾರಿಯಾದರೂ ಸಂಪೂರ್ಣ ಬ್ರೇಕ್ ಬೀಳುವುದೇ ಎಂಬುದನ್ನು ಕಾದು ನೋಡಬೇಕಿದೆ.